ಮೂಡುಬಿದಿರೆ: ಸ್ವಾತಂತ್ರ್ಯವೆಂದರೆ ಕೇವಲ ಇಷ್ಟಬಂದಂತೆ ಬದುಕುವ ಹಕ್ಕಲ್ಲ, ಬದಲಿಗೆ ದೇಶ, ಸಂವಿಧಾನ ಮತ್ತು ಸಮಾಜದ ಕಡೆಗಿನ ಕರ್ತವ್ಯ ಹಾಗೂ ಜವಾಬ್ದಾರಿಯನ್ನೂ ಒಳಗೊಂಡಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ನಿವೃತ್ತ ಸೇನಾ ಅಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯವು ಅನೇಕ ತಲೆಮಾರುಗಳ ತ್ಯಾಗ ಮತ್ತು ಸಶಸ್ತ್ರ ಪಡೆಗಳ ಯೋಧರ ಬಲಿದಾನದ ಫಲವಾಗಿದೆ. 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಾಣದ ಗುರಿ ತಲುಪಲು ಯುವಜನರು ಕೇವಲ ತಂತ್ರಜ್ಞಾನದ ಬಳಕೆದಾರರಾಗದೆ ಆವಿಷ್ಕಾರಕರು, ಉದ್ಯಮಿಗಳು ಹಾಗೂ ಜವಾಬ್ದಾರಿಯುತ ನಾಗರಿಕರಾಗಬೇಕು. ಶಿಕ್ಷಣವು ಅಂಕಗಳಿಗಷ್ಟೇ ಸೀಮಿತವಾಗದೆ ವ್ಯಕ್ತಿತ್ವ, ಮೌಲ್ಯಗಳು ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಬೇಕು. ದೇಶ ನಮಗೆ ಏನು ನೀಡಿದೆ ಎಂಬುದಕ್ಕಿಂತ, ನಾವು ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂಬುದು ಪ್ರತಿಯೊಬ್ಬರಿಗೂ ಮುಖ್ಯವಾಗಬೇಕು ಎಂದು ಕರೆ ನೀಡಿದರು.
ಈ ಆಚರಣೆಯ ಪ್ರಮುಖ ಆಕರ್ಷಣೆಯಾಗಿ 2,550 ವಿದ್ಯಾರ್ಥಿಗಳು ಮೈದಾನದಲ್ಲಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಧಿರಿಸಿನಲ್ಲಿ ವಿಶಾಲವಾದ ತ್ರಿವರ್ಣ ಧ್ವಜದ ಚಿತ್ರಣವನ್ನು ಮೂಡಿಸಿದರು. 8,350 ವಿದ್ಯಾರ್ಥಿಗಳು ಆಕಾಶ ನೀಲಿ ಬಣ್ಣದ ಟೀ ಶರ್ಟ್ ಧರಿಸಿ ಹಾಗೂ 1,935 ವಿದ್ಯಾರ್ಥಿಗಳು ಮೈದಾನದ ಗಡಿಭಾಗದಲ್ಲಿ ಸಾಲಾಗಿ ನಿಂತು ಆಕರ್ಷಕ ತ್ರಿವರ್ಣ ವಿನ್ಯಾಸವನ್ನು ರೂಪಿಸಿದರು. ತ್ರಿವರ್ಣದ ಬ್ಲಾಸ್ಟರ್ಗಳು ಮತ್ತು ವಿಶೇಷ ಬಣ್ಣದ ಅಲಂಕಾರಗಳು ಸಮಾರಂಭದ ದೃಶ್ಯ ವೈಭವವನ್ನು ಹೆಚ್ಚಿಸಿದವು.
ಕಾರ್ಯಕ್ರಮದಲ್ಲಿ ಅಜಯ್ ವಾರಿಯರ್ ತಂಡದಿಂದ ದೇಶಭಕ್ತಿ ಗೀತೆಗಳ ವಿಶೇಷ ಸಂಗೀತ ಕಚೇರಿ ನಡೆಯಿತು. ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ ಆಳ್ವ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಉಪನ್ಯಾಸಕರಾದ ವೇಣುಗೋಪಾಲ ಕೆ. ಶೆಟ್ಟಿ ಹಾಗೂ ಡಾ. ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.