ಬಂಟ್ವಾಳ: ತಾಲೂಕಿನ ರಾಯಿ ಗ್ರಾಮದ ಪಾಂಚಕೋಡಿ ಎಂಬಲ್ಲಿ ರಾತ್ರಿ ವೇಳೆ ಕಾಲುಸಂಕದಿಂದ ಕಾಲುಜಾರಿ ತೋಡಿಗೆ ಬಿದ್ದು ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ರಾಯಿ ಗ್ರಾಮದ ಪಾಂಚಕೋಡಿ ಮನೆ ನಿವಾಸಿ ಜೋಸೆಫ್ ಪಿಂಟೊ ಎಂಬವರ ಮಗ ಜೀವನ್ ಪಿಂಟೊ (48) ನಾಪತ್ತೆಯಾದವರಾಗಿದ್ದಾರೆ.
ಆಗಸ್ಟ್ 01, 2026ರಂದು ರಾತ್ರಿ ಸುಮಾರು 7.30ರ ಸಮಯದಲ್ಲಿ ಜೀವನ್ ಪಿಂಟೊ ಅವರು ತಮ್ಮ ವಾಸದ ಮನೆಯಿಂದ ಸ್ವಲ್ಪ ಅಂತರದಲ್ಲಿರುವ ಮಾವನ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಆ ಸಂದರ್ಭದಲ್ಲಿ ದಾರಿಮಧ್ಯೆಯ ತೋಡಿಗೆ ಅಳವಡಿಸಲಾಗಿದ್ದ ಕಾಲುಸಂಕದ ಮೇಲೆ ಸಾಗುವಾಗ ಕಾಲು ಜಾರಿ ತೋಡಿನ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ತೋಡಿನ ಬಳಿ ಅವರ ಟಾರ್ಚ್ ಹಾಗೂ ಚಪ್ಪಲಿ ಪತ್ತೆಯಾಗಿವೆ.
ಘಟನೆ ನಡೆದ ಸಮಯದಲ್ಲಿ ಅತಿಯಾದ ಮಳೆ ಹಾಗೂ ಕತ್ತಲೆ ಇದ್ದ ಕಾರಣ ವ್ಯಕ್ತಿಯ ಪತ್ತೆಗೆ ತೀವ್ರ ಅನಾನುಕೂಲ ಉಂಟಾಗಿತ್ತು. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದು, ನಾಪತ್ತೆಯಾದ ವ್ಯಕ್ತಿಗಾಗಿ ಶೋಧನಾ ಕಾರ್ಯವನ್ನು ಮುಂದುವರಿಸಿದ್ದಾರೆ.