ಮಂಗಳೂರು : ಶೈಕ್ಷಣಿಕ ಕ್ಷೇತ್ರದಲ್ಲಿ ಸುರಕ್ಷಿತ ಹಾಗೂ ಗೌರವಯುತ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯು 'ರ್ಯಾಗಿಂಗ್ನ ಕಾನೂನು ಪರಿಣಾಮಗಳು' ವಿಷಯದ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಂಸ್ಥೆಯ ರ್ಯಾಗಿಂಗ್ ವಿರೋಧಿ ಪರಿಶೀಲನಾ ಸಮಿತಿ ಹಾಗೂ ಅದರ ಎಲ್ಲಾ ಸಂಯೋಜಿತ ಕಾಲೇಜುಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ನಡೆಸಲಾಯಿತು. ರಾಷ್ಟ್ರಮಟ್ಟದಲ್ಲಿ ಆಗಸ್ಟ್ 12 ರಂದು 'ರ್ಯಾಗಿಂಗ್ ವಿರೋಧಿ ದಿನ'ವನ್ನು ಆಚರಿಸಲಾಗುತ್ತದೆಯಾದರೂ, ಈ ಸಂಸ್ಥೆಯು 'ರ್ಯಾಗಿಂಗ್ಗೆ ಇಲ್ಲ ಎನ್ನಿ, ಗೌರವಕ್ಕೆ ಹೌದು ಎನ್ನಿ' ಎಂಬ ಧೈಯವಾಕ್ಯದೊಂದಿಗೆ ಜುಲೈ 23 ರಂದೇ ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ರೆ. ಡಾ. ಮೈಕೆಲ್ ಸಂತುಮಾಯೋರ್ ಕಾರ್ಯಕ್ರಮಕ್ಕೆ ಆಗಮಿಸಿದ್ದವರನ್ನು ಸ್ವಾಗತಿಸಿ, ರ್ಯಾಗಿಂಗ್ ಮುಕ್ತ ಕ್ಯಾಂಪಸ್ ನಿರ್ಮಿಸುವ ಸಂಸ್ಥೆಯ ಬದ್ಧತೆಯನ್ನು ವ್ಯಕ್ತಪಡಿಸಿದರು. ರ್ಯಾಗಿಂಗ್ ವಿರೋಧಿ ಸಮಿತಿಯ ಸಂಚಾಲಕ ಡಾ. ನಾಗೇಶ್ ಕೆ.ಆರ್. ಅತಿಥಿಗಳನ್ನು ಪರಿಚಯಿಸಿದರು. ಸಂಸ್ಥೆಯ ನಿರ್ದೇಶಕ ರೆ. ಫಾ. ಫೌಸ್ಟಿನ್ ಲೂಕಾಸ್ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯು ರ್ಯಾಗಿಂಗ್ ವಿರುದ್ಧ 'ಶೂನ್ಯ ಸಹಿಷ್ಣುತಾ ನೀತಿ'ಯನ್ನು ಹೊಂದಿದ್ದು, ವಿದ್ಯಾರ್ಥಿಗಳು ಪರಸ್ಪರ ಗೌರವ, ಕರುಣೆ ಹಾಗೂ ಸೌಹಾರ್ದತೆಯ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಪರಸ್ಪರ ಮಾರ್ಗದರ್ಶಕರಾಗಿ ಇರಬೇಕೆಂದು ಸೂಚಿಸಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರಿನ ವಕೀಲೆ ಲತಾ ಸಿ. ಎಸ್. ಹೊಳ್ಳ ಅವರು ರ್ಯಾಗಿಂಗ್ನ ವಿವಿಧ ಸ್ವರೂಪಗಳು, ಅದರಿಂದಾಗುವ ಕಾನೂನು ಪರಿಣಾಮಗಳು, ಶಿಕ್ಷೆಗಳು ಮತ್ತು ಸುಪ್ರೀಂ ಕೋರ್ಟ್ನ ಮಹತ್ವದ ತೀರ್ಪುಗಳ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ತಮ್ಮ ಹಕ್ಕು ಮತ್ತು ಜವಾಬ್ದಾರಿಗಳನ್ನು ಅರಿತು ಸಂಸ್ಥೆಯಲ್ಲಿ ನೈತಿಕ ನಡವಳಿಕೆಯನ್ನು ಕಾಯ್ದುಕೊಳ್ಳಬೇಕೆಂದು ಕರೆ ನೀಡಿದರು. ಫಾದರ್ ಮುಲ್ಲರ್ ಸ್ಪೀಚ್ ಅಂಡ್ ಹಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಸಿಂಥಿಯಾ ಸಂತುಮಾಯೋರ್ ಧನ್ಯವಾದ ಸಮರ್ಪಿಸಿದರು. ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಮಿತಿ ಸದಸ್ಯರು ಹಾಗೂ ನೂರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.