ಮಂಗಳೂರು: ಜೆಇಇ ಅಡ್ವಾನ್ಸ್ಡ್ 2026ರ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದ 79ನೇ ರ್ಯಾಂಕ್ ಹಾಗೂ ಜೆಇಇ ಮೈನ್ಸ್ನಲ್ಲಿ 335ನೇ ರ್ಯಾಂಕ್ ಗಳಿಸುವ ಮೂಲಕ ಮಂಗಳೂರಿನ ಪ್ರತಿಭಾವಂತ ವಿದ್ಯಾರ್ಥಿ ಬಿ.ವಿಶ್ರುತ್ ಕೃಷ್ಣ ಆರ್.ಭಟ್ ಅವರು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಸಾಧನೆಯನ್ನು ಗುರುತಿಸಿದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು, ಬೆಂದೂರ್ವೆಲ್ನಲ್ಲಿರುವ ವಿದ್ಯಾರ್ಥಿಯ ನಿವಾಸಕ್ಕೆ ಭೇಟಿ ನೀಡಿ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಿದರು.
ಎನ್ಐಟಿಕೆ ಸುರತ್ಕಲ್ನ ಪ್ರಾಧ್ಯಾಪಕ ಡಾ.ಬಡೆಕೈ ರಾಮಚಂದ್ರ ಭಟ್ ಮತ್ತು ಮಂಗಳೂರಿನ ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಪೂರ್ಣಿಮಾ ಆರ್.ಭಟ್ ದಂಪತಿಯ ಪುತ್ರನಾಗಿರುವ ವಿಶ್ರುತ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಟಾಪರ್ ಆಗಿ ಹೊರಹೊಮ್ಮುವುದರೊಂದಿಗೆ, ರಾಜ್ಯದ ಅಗ್ರ 10 ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಮಹತ್ತರ ಸಾಧನೆಯು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕರು ಹರ್ಷ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ವಿದ್ಯಾರ್ಥಿಯ ಎಲ್ಲಾ ಕನಸುಗಳು ನನಸಾಗಲಿ ಹಾಗೂ ಅವರು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವ ಮೂಲಕ ನಾಡಿನ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಲಿ ಎಂದು ಶಾಸಕರು ಶುಭ ಹಾರೈಸಿದರು.