ಮಂಗಳೂರು : ಮಂಗಳೂರು ಮಹಾನಗರ ಆಟೋ ರಿಕ್ಷಾ ಚಾಲಕರ 30ನೇ ವಾರ್ಷಿಕೋತ್ಸವದ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಐವನ್ ಡಿ'ಸೋಜಾ ಅವರು ಎಲ್.ಪಿ.ಜಿ ದರ ಏರಿಕೆಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ದಿನವೊಂದಕ್ಕೆ ಸುಮಾರು 5 ಲೀಟರ್ ಎಲ್.ಪಿ.ಜಿ ಬಳಸಿ ಬಾಡಿಗೆ ಮಾಡುವ ಸುಮಾರು 4,000 ರಿಕ್ಷಾ ಚಾಲಕರು ಇಂಧನ ದರ ಏರಿಕೆಯಿಂದಾಗಿ ಪ್ರತೀ ದಿನ 200 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ತೈಲ ಬೆಲೆ ಏರಿಕೆಯಿಂದ ದುಡಿಯುವ ವರ್ಗಗಳಿಗೆ ತೊಂದರೆಯಾಗುತ್ತಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಆಟೋ ರಿಕ್ಷಾ ದರ ಪರಿಷ್ಕರಣೆಯ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.
ಅಸಂಘಟಿತ ಕಾರ್ಮಿಕ ವರ್ಗದ ಸಂಕಷ್ಟಗಳಿಗೆ ಸರ್ಕಾರ ಬಲ ತುಂಬಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 60 ವರ್ಷದ ನಂತರ ಕನಿಷ್ಠ 3,000 ರೂಪಾಯಿ ನಿವೃತ್ತಿ ವೇತನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಐವನ್ ಡಿ'ಸೋಜಾ ಹೇಳಿದರು. ಕಾರ್ಯಕ್ರಮದ ಸಂದರ್ಭದಲ್ಲಿ ರಿಕ್ಷಾ ಚಾಲಕರಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಸಂಘದ ಸದಸ್ಯರಾದ ಶೇಖರ್ ದೇರಳಕಟ್ಟೆ, ವಸಂತ ಶೆಟ್ಟಿ ವೀರನಗರ, ಅನಿಲ್ ಜೆರಾಲ್ ಲೋಬೋ, ಸೀತಾರಾಮ ಶೆಟ್ಟಿ ಹಾಗೂ ವಿಲ್ಫಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.