ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರನ್ನು ಕಂಗಾಲಾಗಿಸಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು 'ಮಿಷನ್ ಫಾರ್ ಇಂಟೆಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್' (MIDH) ಯೋಜನೆಯಡಿ ಮಹತ್ವದ ಹೆಜ್ಜೆ ಇರಿಸಿದೆ. ಈ ಯೋಜನೆಯಡಿ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಹಮ್ಮಿಕೊಳ್ಳಲಾಗಿರುವ ವೈಜ್ಞಾನಿಕ ಪ್ರಾತ್ಯಕ್ಷಿಕೆ ತೋಟಗಳಿಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CPCRI) ನೇತೃತ್ವದಲ್ಲಿ ನಡೆಯುತ್ತಿರುವ ಈ ವಿಶೇಷ ಅಧ್ಯಯನ ಮತ್ತು ರೋಗ ನಿಯಂತ್ರಣ ಕ್ರಮಗಳ ಪ್ರಗತಿಯನ್ನು ಸಂಸದರು ವೀಕ್ಷಿಸಿದರು. ಗುತ್ತಿಗಾರಿನ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಸುತ್ತಮುತ್ತಲ ಬೆಳೆಗಾರರ ಸುಮಾರು 6 ಎಕರೆ ಅಡಿಕೆ ತೋಟಗಳಲ್ಲಿ ಕಳೆದ ಜೂನ್ನಿಂದ ವೈಜ್ಞಾನಿಕ ವಿಧಾನಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಇಲ್ಲಿನ ಗಿಡಗಳಿಗೆ ನೀಡಲಾಗುತ್ತಿರುವ ಪೋಷಕಾಂಶಗಳು ಹಾಗೂ ರೋಗ ತಡೆಗಟ್ಟಲು ಅನುಸರಿಸುತ್ತಿರುವ ತಾಂತ್ರಿಕ ಮಾರ್ಗಸೂಚಿಗಳ ಬಗ್ಗೆ ಕೃಷಿ ವಿಜ್ಞಾನಿಗಳಿಂದ ಸಂಸದರು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾ. ಚೌಟ ಅವರು, ಜಿಲ್ಲೆಯ ಅಡಿಕೆ ಕೃಷಿಕರ ಬದುಕಿಗೆ ಸವಾಲಾಗಿರುವ ಎಲೆಚುಕ್ಕಿ ರೋಗಕ್ಕೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಸಿಪಿಸಿಆರ್ಐ ಮತ್ತು ಕೃಷಿ ವಿಜ್ಞಾನಿಗಳ ತಂಡವು ಕಾಲಕಾಲಕ್ಕೆ ತೋಟಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ರೋಗದ ಹರಡುವಿಕೆಯ ಮೇಲೆ ನಿಗಾ ಇರಿಸಲು ಸುಬ್ರಹ್ಮಣ್ಯ ಪ್ರಸಾದ್ ಅವರ ತೋಟದಲ್ಲಿ 'ಅಟೋಮ್ಯಾಟಿಕ್ ವೆದರ್ ಸ್ಟೇಷನ್' ಅಳವಡಿಸಿರುವುದು ವಿಶೇಷವಾಗಿದೆ. ಎಲೆಚುಕ್ಕಿ ರೋಗವು ತೇವಾಂಶ ಮತ್ತು ಹವಾಮಾನ ಬದಲಾವಣೆಯಿಂದ ವೇಗವಾಗಿ ಹರಡುವುದರಿಂದ, ಈ ಕೇಂದ್ರದ ಮೂಲಕ ಮಳೆಯ ಪ್ರಮಾಣ, ತಾಪಮಾನ ಹಾಗೂ ಗಾಳಿಯಲ್ಲಿನ ತೇವಾಂಶವನ್ನು ನಿಖರವಾಗಿ ದಾಖಲಿಸಿ ಅಧ್ಯಯನ ಮಾಡಲಾಗುತ್ತಿದೆ.
ಈ ಭೇಟಿಯ ವೇಳೆ ಸಿಪಿಸಿಆರ್ಐ ಕಾಸರಗೋಡು ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ವಿಜ್ಞಾನಿಗಳಾದ ರಾಜೇಶ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ವಿಜ್ಞಾನಿಗಳು ಮತ್ತು ರೈತರ ನಡುವಿನ ಈ ಸಮನ್ವಯವು ಶೀಘ್ರದಲ್ಲೇ ರೋಗ ಮುಕ್ತ ಅಡಿಕೆ ಕೃಷಿಗೆ ದಾರಿಯಾಗಲಿದೆ ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.