ಮಂಗಳೂರು : ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯು 2026ರ ವಿಶ್ವ ಆರೋಗ್ಯ ದಿನದ ಅಂಗವಾಗಿ ಮಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿಗಳಿಗಾಗಿ "ರಸ್ತೆಯ ರಕ್ಷಕರಿಗೆ ಆರೈಕೆಯ ಸಂಕೇತ" ಎಂಬ ವಿಶೇಷ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. "ಒಟ್ಟಾಗಿ ಆರೋಗ್ಯಕ್ಕಾಗಿ: ವಿಜ್ಞಾನದೊಂದಿಗೆ ನಿಲ್ಲಿ" ಎಂಬ ಧ್ಯೇಯವಾಕ್ಯದಡಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ನಗರದ ಸುಮಾರು 150ಕ್ಕೂ ಹೆಚ್ಚು ಸಂಚಾರಿ ಪೊಲೀಸರು ಭಾಗವಹಿಸಿ ತಮ್ಮ ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದ ಆರಂಭದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ. ಉದಯ್ ಕುಮಾರ್ ಸ್ವಾಗತಿಸಿದರು.
ಎಫ್.ಎಂ.ಸಿ.ಐ ನಿರ್ದೇಶಕರಾದ ವಂದನೀಯ ಫಾದರ್ ಫಾಸ್ಟಿನ್ ಲೂಕಾಸ್ ಲೋಬೋ ಅವರು ಮುಖ್ಯ ಅತಿಥಿಯಾಗಿದ್ದ ಮಂಗಳೂರು ನಗರ ಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಶ್ರೀ ಕೆ. ರವಿ ಶಂಕರ್ ಅವರಿಗೆ ಸಸಿಯನ್ನು ನೀಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸುದೀರ್ಘ ಅವಧಿಯ ಕರ್ತವ್ಯದ ವೇಳೆ ಉಂಟಾಗುವ ದೈಹಿಕ ನೋವು ಮತ್ತು ಬಿಸಿಲಿನ ತಾಪವನ್ನು ನಿರ್ವಹಿಸಲು ಸಹಕಾರಿಯಾಗುವಂತೆ ಫಾದರ್ ಮುಲ್ಲರ್ ಹೋಮಿಯೋಪತಿ ವಿಭಾಗದ 'ಆರೈಕೆ ಕಿಟ್'ಗಳನ್ನು ಎಲ್ಲಾ ಸಿಬ್ಬಂದಿಗೆ ವಿತರಿಸಲಾಯಿತು.
ವಂದನೀಯ ಫಾದರ್ ಫಾಸ್ಟಿನ್ ಅವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ಅತ್ಯಂತ ಸ್ಪಷ್ಟ ಹಾಗೂ ಪ್ರಭಾವಶಾಲಿ ಕನ್ನಡದಲ್ಲಿ ಮಂಡಿಸಿ, ಸಂಚಾರಿ ಪೊಲೀಸರ ನಿಸ್ವಾರ್ಥ ಸೇವೆ ಮತ್ತು ಅವರ ದಣಿವರಿಯದ ಕೆಲಸವನ್ನು ಶ್ಲಾಘಿಸಿದರು. ಅವರ ಈ ಕನ್ನಡ ಭಾಷಣವು ನೆರೆದಿದ್ದವರ ಮನಸೂರೆಗೊಂಡಿತು. ಮುಖ್ಯ ಅತಿಥಿ ಕೆ. ರವಿ ಶಂಕರ್ ಅವರು ಪೊಲೀಸರ ವೃತ್ತಿಪರ ಬದುಕಿನ ಸವಾಲುಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದರು.
ನಂತರ ನಡೆದ ಆರೋಗ್ಯ ಗೋಷ್ಠಿಗಳಲ್ಲಿ ಚರ್ಮರೋಗ ವಿಭಾಗದ ಡಾ. ರಾಹುಲ್ ನಾಯಕ್ ಮತ್ತು ಡಾ. ಸುಶ್ಮಿತಾ ಅವರು ಬಿಸಿಲಿನಿಂದ ಉಂಟಾಗುವ ಚರ್ಮದ ಸಮಸ್ಯೆಗಳ ಬಗ್ಗೆ ತಿಳಿಸಿಕೊಟ್ಟರು. ಡಾ. ಸಿಂಥಿಯಾ ಸಂತುಮಾಯೋರ್ ಅವರು ಶಬ್ದ ಮಾಲಿನ್ಯ ಮತ್ತು ಶ್ರವಣ ದೋಷದ ಕುರಿತು ಮಾಹಿತಿ ನೀಡಿದರೆ, ಫಿಸಿಯೋಥೆರಪಿ ವಿಭಾಗದ ಶ್ರೀ ಪ್ರದೀಪ್ ಕೆ.ಪಿ. ಅವರು ದೀರ್ಘಕಾಲ ನಿಂತು ಕೆಲಸ ಮಾಡುವುದರಿಂದ ಎದುರಾಗುವ ಸ್ನಾಯು ಮತ್ತು ಮೂಳೆ ನೋವುಗಳನ್ನು ತಡೆಗಟ್ಟುವ ಸರಳ ವ್ಯಾಯಾಮಗಳ ಪ್ರಾತ್ಯಕ್ಷಿಕೆ ನೀಡಿದರು.
ವೇದಿಕೆಯಲ್ಲಿ ಆಡಳಿತಾಧಿಕಾರಿಗಳಾದ ವಂದನೀಯ ಫಾದರ್ ಜೀವಿನ್ ಸಿಕ್ವೇರಾ, ವಂದನೀಯ ಡಾ. ಮೈಕೆಲ್ ಸಂತುಮಾಯೋರ್ ಹಾಗೂ ಇನ್ಸ್ಪೆಕ್ಟರ್ ಶ್ರೀ ಶಿವಕುಮಾರ್ ಉಪಸ್ಥಿತರಿದ್ದರು. ಗುಣಮಟ್ಟ ವಿಭಾಗದ ಸೋನಲ್ ಸೋಫಿಯಾ ಫೆರ್ನಾಂಡಿಸ್ ಮತ್ತು ಶೈನಿ ಕಾರ್ಡೋಜಾ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಸಂಚಾರಿ ಪೊಲೀಸರ ಆರೋಗ್ಯದ ಮೇಲೆ ಬೆಳಕು ಚೆಲ್ಲಿದ ಈ ಅರ್ಥಪೂರ್ಣ ಕಾರ್ಯಕ್ರಮವು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.