ಮಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಲ್ಲಿ ತೀವ್ರವಾದ ಬಿಸಿಲು ಮತ್ತು ಆರ್ದ್ರತೆಯ ವಾತಾವರಣ (Hot and Humid conditions) ಇರಲಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ ದಾಖಲೆಯ ತಾಪಮಾನ
ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ (ಮಾಚ್ 10 ರಿಂದ ಮಾರ್ಚ್ 11ರ ಬೆಳಿಗ್ಗೆಯವರೆಗೆ), ರಾಜ್ಯದಲ್ಲೇ ಗರಿಷ್ಠ ತಾಪಮಾನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿದೆ.
ದಕ್ಷಿಣ ಕನ್ನಡ: ಗರಿಷ್ಠ 37.0°C | ಕನಿಷ್ಠ 24.6°C
ಉತ್ತರ ಕನ್ನಡ: ಗರಿಷ್ಠ 36.6°C | ಕನಿಷ್ಠ 21.2°C
ಉಡುಪಿ: ಗರಿಷ್ಠ 35.8°C | ಕನಿಷ್ಠ 24.0°C
ಕರಾವಳಿ ಮಾತ್ರವಲ್ಲದೆ ಒಳನಾಡಿನ ಜಿಲ್ಲೆಗಳಾದ ಕಲ್ಬುರ್ಗಿ (36.6°C), ಬೀದರ್ (36.3°C) ಮತ್ತು ಹಾವೇರಿ (36.4°C) ಜಿಲ್ಲೆಗಳಲ್ಲೂ ಕೂಡ ತಾಪಮಾನ ಏರಿಕೆ ಕಂಡುಬಂದಿದೆ.
ಸಾರ್ವಜನಿಕರಿಗೆ ಸೂಚನೆಗಳು:
ಬಿಸಿಲಿನ ತಾಪ ಹೆಚ್ಚಿರುವ ಮಧ್ಯಾಹ್ನ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ.
ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಹೆಚ್ಚಿನ ಪ್ರಮಾಣದಲ್ಲಿ ನೀರು, ಎಳನೀರು ಅಥವಾ ಮಜ್ಜಿಗೆಯನ್ನು ಸೇವಿಸಿ.
ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಿ ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿ ಅಥವಾ ಟೋಪಿ ಬಳಸಿ. ಹೆಚ್ಚುತ್ತಿರುವ ಶಾಖದ ಅಲೆಯ (Heat Wave) ಹಿನ್ನೆಲೆಯಲ್ಲಿ ವಯಸ್ಸಾದವರು ಮತ್ತು ಮಕ್ಕಳು ವಿಶೇಷ ಕಾಳಜಿ ವಹಿಸಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.