ಮಂಗಳೂರು,: ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾಕುಪ್ರಾಣಿ ಪ್ರಿಯರಿಗೆ ಇದೊಂದು ಸಿಹಿ ಸುದ್ದಿ. ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಸಾಕುಪ್ರಾಣಿಗಳಿಗೆ ಅತ್ಯಗತ್ಯವಾದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ, ಮಂಗಳೂರಿನಲ್ಲೇ ಮೊದಲ ಬಾರಿಗೆ 'ಪೆಟ್ ಡಯಾಲಿಸಿಸ್' (ಸಾಕುಪ್ರಾಣಿಗಳ ಡಯಾಲಿಸಿಸ್) ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ. ಕುಳಶೇಖರದಲ್ಲಿರುವ 'ಲಿಟಲ್ ಪಾಸ್ ವೆಟರಿನರಿ ಕ್ಲಿನಿಕ್'ನಲ್ಲಿ ಈ ನೂತನ ತಂತ್ರಜ್ಞಾನದ ಡಯಾಲಿಸಿಸ್ ಯಂತ್ರವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.
ಮೂತ್ರಪಿಂಡದ ತೊಂದರೆಯಿಂದ ಬಳಲುವ ಮೂಕಪ್ರಾಣಿಗಳಿಗೆ ಈ ಡಯಾಲಿಸಿಸ್ ಘಟಕವು ಸಂಜೀವಿನಿಯಾಗಿ ಪರಿಣಮಿಸಲಿದೆ. ಮಂಗಳೂರು ಮತ್ತು ಸುಮಾರು 200 ಕಿಲೋಮೀಟರ್ ವ್ಯಾಪ್ತಿಯಲ್ಲಿ ಇಂತಹ ಯಾವುದೇ ಸೌಲಭ್ಯ ಇಲ್ಲದಿರುವುದನ್ನು ಮನಗಂಡು, ಈ ಅತ್ಯಾವಶ್ಯಕ ಸೇವೆಯನ್ನು ಸ್ಥಳೀಯವಾಗಿ ಲಭ್ಯವಾಗುವಂತೆ ಮಾಡಲಾಗಿದೆ.
ಈ ಹಿರಿಯ ನಾಗರಿಕರಾದ ವಿನ್ಸೆಂಟ್ ಜೋಸೆಫ್ ನೀಲಿಯಾರ (ಶಾಜು) ಅವರು ದೀಪ ಬೆಳಗಿಸಿ, ರಿಬ್ಬನ್ ಕತ್ತರಿಸುವ ಮೂಲಕ ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿದರು.
ಈ ಮಹತ್ವದ ಯೋಜನೆಯ ಹಿಂದಿನ ರೂವಾರಿ ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್ ಸರ್ಜನ್ ಆಗಿರುವ ಡಾ. ಶ್ರೇಯಸ್ ಸೊರಕೆ. ಪ್ರಾಣಿಗಳ ಮೇಲಿನ ಕಾಳಜಿಯಿಂದ ಇಂತಹದೊಂದು ನವೀನ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದ ಅವರ ದೂರದೃಷ್ಟಿ ಮತ್ತು ಸೇವಾ ಮನೋಭಾವವನ್ನು ಗುರುತಿಸಿ, ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು. ಭಾಜಪ ಕರ್ನಾಟಕ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿ ಜೆಸ್ಸೆಲ್ ಡಿಸೋಜಾ ಅವರು ಈ ಇಡೀ ಉಪಕ್ರಮವನ್ನು ಸಮನ್ವಯಗೊಳಿಸಿ, ವಿವಿಧ ದಾನಿಗಳು ಮತ್ತು ಸಂಸ್ಥೆಗಳ ಸಹಕಾರವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಜಿಲ್ಲೆ 3181 ರ ಸಹಾಯಕ ಗವರ್ನರ್ ಆರ್ಟಿಎನ್ ಡಾ. ರವಿಶಂಕರ್ ರಾವ್ ಅವರು, ಮಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಇಂತಹ ಮಾನವೀಯ ಮತ್ತು ವೈಜ್ಞಾನಿಕ ಉಪಕ್ರಮಗಳು ಅತ್ಯಂತ ಅಗತ್ಯ ಎಂದರು. "ಸ್ಮಾರ್ಟ್ ಸಿಟಿ ಎಂದರೆ ಕೇವಲ ಕಟ್ಟಡ, ರಸ್ತೆಗಳಲ್ಲ; ಪ್ರಾಣಿಗಳ ಕಲ್ಯಾಣಕ್ಕೂ ಸಮಾನ ಆದ್ಯತೆ ನೀಡುವ ನಗರವೇ ನಿಜವಾದ ಸ್ಮಾರ್ಟ್ ಸಿಟಿ" ಎಂದು ಅವರು ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಮಂಗಳೂರು ಸೌತ್ ಅಧ್ಯಕ್ಷ ಆರ್ಟಿಎನ್ ಹರೀಶ್ ಅಡ್ಯಾರ್, ಕಾರ್ಯದರ್ಶಿ ಆರ್ಟಿಎನ್ ಸೂರ್ಯಕಾಂತ್ ನಾಯಕ್, ಆರ್ಟಿಎನ್ ಜಿ.ಕೆ. ಶೆಟ್ಟಿ, ಕರ್ನಾಟಕ ಸೆಕ್ಯುರಿಟಿಯ ಉದ್ಯಮಿ ಮತ್ತು ರೋಟೇರಿಯನ್ ಆರ್ಟಿಎನ್ ಟಿ.ಎ. ಅಶೋಕನ್, ಅನಿಮಲ್ ಕೇರ್ ಟ್ರಸ್ಟ್ನ ಸುಮಾ ನಾಯಕ್, ಡಯಾಲಿಸಿಸ್ ತಂತ್ರಜ್ಞ ನಿತಿನ್ ಕುಮಾರ್ ಹಾಗೂ ಲಿಟಲ್ ಪಾಸ್ ವೆಟರಿನರಿ ಕ್ಲಿನಿಕ್ನ ಡಾ. ಯಶಸ್ವಿ ನಾರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.