ಅರ್ಕುಳ : ಜೈನ ಧರ್ಮವು ಧಾರ್ಮಿಕ ಸಹಿಷ್ಣುತೆ, ಆತ್ಮಶುದ್ಧಿ ಮತ್ತು ತಪಸ್ಸಿನ ಮೂಲಕ ಮೋಕ್ಷಪ್ರಾಪ್ತಿಯ ಮಾರ್ಗವನ್ನು ತೋರಿಸುತ್ತದೆ. ಅಹಿಂಸೆಯ ಪರಮತತ್ವವು ಭಾರತೀಯ ಸಂಸ್ಕೃತಿಯ ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸಿದೆ. ಅರ್ಕುಳ ಅನಂತನಾಥ ಸ್ವಾಮಿ ಬಸದಿಯ ನವೀಕೃತ ಚಂದ್ರಶಾಲೆ ಕೇವಲ ಅಲಂಕಾರವಲ್ಲ; ಅದು ಜ್ಞಾನ ಮತ್ತು ಪ್ರಕಾಶದ ಸಂಕೇತವಾಗಿದೆ. ಈ ಪವಿತ್ರ ಪುನರುದ್ಧಾರ ಕಾರ್ಯವು ಭಕ್ತರಲ್ಲಿ ಧರ್ಮಜಾಗೃತಿಯನ್ನು ಉಂಟುಮಾಡಿ, ಅಹಿಂಸೆ–ಸಂಯಮ–ಸನ್ಮಾರ್ಗ ಪ್ರೇರೇಪಿಸಲಿ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಕರೆ ನೀಡಿದರು. ಶ್ರೀ ಸ್ವಾಮೀಜಿಯವರು ಶ್ರೀ ಕ್ಷೇತ್ರ ಅರ್ಕುಳದ ವಾರ್ಷಿಕ ಜಾತ್ರೆಯ ಪ್ರಯುಕ್ತ ನಡೆದ ಚಂಡಿಕಾ ಯಾಗ ಹಾಗೂ ನಂದಿ ಪೂಜೆಯಲ್ಲು ಭಾಗವಹಿಸಿ ಬಸದಿಯ ನವೀಕೃತ ಚಂದ್ರಶಾಲೆಯಲ್ಲಿ ದೀಪ ಪ್ರಜ್ವಲನೆ ಮಾಡಿ ಮಾತನಾಡುತ್ತಿದ್ದರು. ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮೂಡುಬಿದರೆ ಶಾಸಕ ಉಮಾನಾಥ ಕೋಟ್ಯಾನ್,ಅರ್ಕುಳ ಬೀಡು ರತ್ನರಾಜ ಶೆಟ್ಟಿ, ಅಜಿತ್ ಕುಮಾರ್ ಶೆಟ್ಟಿ, ಕಂಪ ಸದಾನಂದ ಆಳ್ವ, ಅರ್ಕುಳ ಬಸದಿ ಪುಷ್ಪರಾಜ ಇಂದ್ರ ಮೊದಲಾದವರು ಉಪಸ್ಥಿತರಿದ್ದರು.