ಬೆಳ್ಮಣ್ ಮಂಗಳೂರು ಕ್ಯಾಥೋಲಿಕ್ ಕೋ-ಆಪರೇಟಿವ್ (ಎಂಸಿಸಿ) ಬ್ಯಾಂಕಿನ ಬೆಳ್ಮಣ್ ಶಾಖೆಯು ತನ್ನ ಕಾರ್ಯಾಚರಣೆಯ ಮೊದಲ ವರ್ಷದಲ್ಲೇ 10 ಕೋಟಿ ರೂಪಾಯಿಗಳ ವ್ಯವಹಾರ ಗುರಿಯನ್ನು ಯಶಸ್ವಿಯಾಗಿ ದಾಟಿದ್ದು, ಈ ಐತಿಹಾಸಿಕ ಸಾಧನೆಯ ಸಂಭ್ರಮಾಚರಣೆ ಮತ್ತು ಪ್ರಥಮ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪರಪ್ಪಾಡಿ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾ| ಡೇನಿಸ್ ಡಿಸೋಜ ಹಾಗೂ ಬೆಳ್ಮಣ್ ಸಂತ ಜೋಸೆಫರ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಲೈಲಾ ಬಬಿತಾ ನೊರೊನ್ಹಾ ಉಪಸ್ಥಿತರಿದ್ದರು.
ಯಶಸ್ಸಿನ ಸಂಕೇತವಾಗಿ ಗಣ್ಯರು ಹಾಗೂ ಗ್ರಾಹಕರ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಹಂಚಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಮೇಲೆ ನಂಬಿಕೆಯಿಟ್ಟು ಬೆಂಬಲಿಸಿದ ಸ್ಥಾಪಕ ಗ್ರಾಹಕರನ್ನು ಗೌರವಿಸಲಾಯಿತು. ಡಿಜಿಟಲ್ ಸೇವೆಯತ್ತ ಬ್ಯಾಂಕ್
ಅಧ್ಯಕ್ಷ ಶ್ರೀ ಅನಿಲ್ ಲೋಬೊ ಮಾತನಾಡಿ, "ಕೇವಲ 10 ತಿಂಗಳಲ್ಲಿ 10 ಕೋಟಿ ರೂ. ಗುರಿ ತಲುಪಿ, ಪ್ರಸ್ತುತ 12 ಕೋಟಿ ರೂ. ಮೈಲಿಗಲ್ಲನ್ನು ದಾಟಿರುವುದು ಗ್ರಾಹಕರ ಅಚಲ ವಿಶ್ವಾಸಕ್ಕೆ ಸಾಕ್ಷಿ. ಗ್ರಾಹಕರೇ ನಮ್ಮ ಬ್ಯಾಂಕಿನ ನಿಜವಾದ ರಾಯಭಾರಿಗಳು," ಎಂದರು.
ಬ್ಯಾಂಕ್ ತನ್ನ ಶಾಖೆಗಳನ್ನು 16 ರಿಂದ 21 ಕ್ಕೆ ಹೆಚ್ಚಿಸಿದ್ದು, ಶೀಘ್ರದಲ್ಲೇ ಒಟ್ಟು 25 ಶಾಖೆಗಳನ್ನು ಹೊಂದುವ ಗುರಿ ಹೊಂದಿದೆ.
ಮುಂದಿನ 2-3 ತಿಂಗಳಲ್ಲಿ ಯುಪಿಐ (UPI) ಮತ್ತು ಗೂಗಲ್ ಪೇ ಸೇವೆಗಳನ್ನು ಪ್ರಾರಂಭಿಸುವುದಾಗಿ ಅವರು ಘೋಷಿಸಿದರು.
ಫಾ| ಡೇನಿಸ್ ಡಿ ಸೋಜಾ ಬ್ಯಾಂಕಿನ ಪಾರದರ್ಶಕತೆ ಮತ್ತು ಶಿಸ್ತುಬದ್ಧ ಆಡಳಿತವನ್ನು ಶ್ಲಾಘಿಸಿದ ಅವರು, ಕಷ್ಟಕಾಲದಲ್ಲಿ ಬ್ಯಾಂಕ್ ನೀಡಿದ ಸಹಕಾರವನ್ನು ಸ್ಮರಿಸಿದರು. ಶಕ್ತಿಯುತ ನಾಯಕತ್ವದಿಂದಾಗಿ ಎಂಸಿಸಿ ಬ್ಯಾಂಕ್ ಇಂದು ಖಾಸಗಿ ಬ್ಯಾಂಕುಗಳಿಗೆ ಪೈಪೋಟಿ ನೀಡುವಂತೆ ಬೆಳೆದಿದೆ ಎಂದರು.
ಶ್ರೀಮತಿ ಲೈಲಾ ಬಬಿತಾ ನೊರೊನ್ಹಾ: "ಒಂದು ವರ್ಷದ ಮಗು ನಡೆಯಲು ಕಲಿಯುವ ಮುನ್ನವೇ ಬೆಳ್ಮಣ್ ಶಾಖೆ ಓಡಲು ಆರಂಭಿಸಿದೆ" ಎಂದು ಮಾರ್ಮಿಕವಾಗಿ ಬಣ್ಣಿಸಿದರು. ಸ್ಥಳೀಯ ಭಾಷೆಯಲ್ಲಿ ಗ್ರಾಹಕರನ್ನು ತಲುಪುವ ಬ್ಯಾಂಕಿನ ಶೈಲಿ ಈ ಯಶಸ್ಸಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಶೈಕ್ಷಣಿಕವಾಗಿ ಸಾಧನೆ ಮಾಡಿದ ಗ್ರಾಹಕರ ಮಕ್ಕಳಾದ ಜನೀಶ್ ಮೆನೆಜೆಸ್, ಪಿಷ್ಮಾ ಡಿ'ಕ್ರೂಜ್, ರಿಯಾ ರಾಚೆಲ್ ರೊಡ್ರಿಗಸ್, ಪರ್ಲ್ ಮಾರಿಸಾ ಕಾರ್ಡೋಜಾ (SSLC) ಹಾಗೂ ಜೋಶ್ವಾ ಹೆರಾಲ್ಡ್ ಫೆರ್ನಾಂಡಿಸ್, ರೋಲಿಶಾ ಪ್ರಿಯಾ ಡಿ'ಸಿಲ್ವಾ, ಜೋಸ್ವಿನ್ ಕ್ರಿಸ್ಟನ್ ಪೈಸ್ (PUC) ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ವಿವಿಧ ವಯೋಮಾನದ ಜನ್ಮದಿನ ಆಚರಿಸಿಕೊಂಡ ಗ್ರಾಹಕರನ್ನು ಗೌರವಿಸಲಾಯಿತು.
ಗುರುದೀಕ್ಷೆಯ ರಜತ ಮಹೋತ್ಸವದ ಹೊಸ್ತಿಲಲ್ಲಿರುವ ಫಾ| ಡೇನಿಸ್ ಡಿಸೋಜ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕಿ ಡಾ| ಫ್ರೀಡಾ ಡಿಸೋಜ, ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜಸ್ ಮತ್ತು ಶಾಖಾ ಪ್ರಬಂಧಕಿ ಶ್ರೀಮತಿ ಶೈನಿ ಲಸ್ರಾದೊ ಉಪಸ್ಥಿತರಿದ್ದರು. ಶ್ರೀ ಜೇಸನ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.