ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸುವುದಾದರೆ ಈಗ ಶಾಸಕರು ನಡೆಸುತ್ತಿರುವ ಗುದ್ದಲ್ಲಿ ಪೂಜೆ ಹೇಗೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.
ನಗರದ ಮಹಾನಗರ ಪಾಲಿಕೆಯಲ್ಲಿರುವ ಅವರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಮಂಗಳೂರಿಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಹಂತ 2ರಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 2024-27ನೇ ಸಾಲಿಗೆ 165ಕೋಟಿ ಅನುದಾನ ಹಂಚಿಕೆಯಾಗಿದೆ. ವೆಟ್ವೆಲ್ ನಿರ್ಮಾಣಕ್ಕಾಗಿ ಸ್ಮಾರ್ಟ್ ಸಿಟಿಯಿಂದ 14.26ಕೋಟಿ ಠೇವಣಿ ಮೊತ್ತವನ್ನು ಪಾಲಿಕೆಗೆ ನೀಡಲಾಗಿದೆ. ನಗರದಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಅಮೃತ್ ಯೋಜನೆಯಡಿ ಕೆಯುಡಿಎಫ್ಸಿ ವತಿಯಿಂದ 8 ಒಳಚರಂಡಿ ಕಾಮಗಾರಿ 316.49ಕೋಟಿ ರೂ. ಅನುಷ್ಠಾನಗೊಳಿಸಲಾಗುತ್ತಿದೆ. ಈ ರೀತಿ ಅಭಿವೃದ್ಧಿ ಮೂಲ ಸೌಕರ್ಯಗಳಿಗೆ ರಾಜ್ಯ ಸರಕಾರ ಅನುದಾನ ನೀಡುತ್ತಿದ್ದು ವಿನಾ ಕಾರಣ ಆರೋಪ ಮಾಡಲಾಗುತ್ತಿದೆ ಎಂದರು. ರಾಜ್ಯ ಸರಕಾರ ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಐಟಿ ಪಾರ್ಕ್ಗಳಿಗೆ ಈಗಾಗಲೇ ಯೋಜನೆ ರೂಪಿಸಿದೆ. ವೇದವ್ಯಾಸ್ ಕಾಮತ್ ಅವರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಹೇಳಿಕೆ ನೀಡುವ ಬದಲು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ತರಲಿ. ಜನರು ಶಾಸಕರನ್ನು ಆಯ್ಕೆ ಮಾಡಿರುವುದು ಅಭಿವೃದ್ಧಿ ಕಾರ್ಯ ಮಾಡಲು. ಗುಜ್ಜರಕೆರೆ ಅಭಿವೃದ್ಧಿ ನಡೆಸಿದರೂ ಅದು ನಿಷ್ಪಯೋಜನವಾಗಿದೆ. ಮೊಯ್ಲಿ ಕೆರೆಯ ಸ್ಥಿತಿನೂ ಅದೇ ರೀತಿ ಇದೆ. ಶಾಸಕರು ಒಂದೇ ಒಂದು ಮನೆಯನ್ನು ನೀಡಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಪ್ರಮುಖರಾದ ವಿನೀಶ್ ಬಲ್ಲಾಳ್, ನಾಗೇಂದ್ರ ಕುಮಾರ್, ಹಿತೇಶ್, ಮನುರಾಜ್, ಭಾಸ್ಕರ್ ರಾವ್, ಪ್ರಕಾಶ್ ಸಾಲ್ಯಾನ್, ಅಮೃತ್ ಕದ್ರಿ ಮುಂತಾದವರು ಉಪಸ್ಥಿತರಿದ್ದರು