ಮಂಗಳೂರು: ಕಡಬ ತಾಲೂಕಿನ ಅಲಂಕಾರು ಗ್ರಾಮದ ಶರವೂರಿನ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಮಹೋತ್ಸವ ಮಾ.25ರಿಂದ ಏ.3ರ ವರೆಗೆ ನಡೆಯಲಿದೆ ಎಂದು ಪ್ರಚಾರ ಸಮಿತಿ ಸಂಚಾಲಕರಾದ ಅಜಿತ್ ರೈ ಮನವಳಿಕೆಗುತ್ತು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇದು ಸೀಮೆ ದೇವಸ್ಥಾನವಾಗಿದ್ದು ಮುಜರಾಯಿ ಇಲಾಖೆಯಿಂದ ಎ ಗ್ರೇಡ್ ಪಡೆದುಕೊಂಡಿದೆ. ಬೇರೆ ಯಾವುದೇ ಸ್ಥಳಗಳಲ್ಲಿ ಕಾಣಸಿಗದ ಶೂಲ ಮತ್ತು ಪದ್ಮವನ್ನು ಧರಿಸಿದ ದ್ವಿಭುಜೆ ದುರ್ಗೆಯ ಮೂರ್ತಿ ಇಲ್ಲಿದೆ. ಇದೀಗ ಇತಿಹಾಸದಲ್ಲಿ ಮೊದಲ ಬಾರಿಗೆ ಅಂದಾಜು 10 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಸಲಾಗಿದೆ ಎಂದರು.
ಮಾ.25ರಂದು ಬ್ರಹ್ಮಕಲಶೋತ್ಸವದ ನಾನಾ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಮಾ.27ರಂದು ಗಂಗಾದೇವಿ ಪುನಃ ಪ್ರತಿಷ್ಠೆ, ಮಾ.30 ರಂದು ಶ್ರೀ ದುರ್ಗಾಪರಮೇಶ್ವರಿ, ಶ್ರೀ ಗಣಪತಿ ಮತ್ತು ಶ್ರೀ ಲಕ್ಷ್ಮೀನಾರಾಯಣ - ದೇವರ ಪುನಃ ಪ್ರತಿಷ್ಠೆ ನಡೆಯಲಿದೆ. ಏ.1ರಂದು ನೂತನ ಏಕಶಿಲಾ ಧ್ವಜ ಪ್ರತಿಷ್ಠೆ, ಚಾಮುಂಡಿ ದೈವ ಪ್ರತಿಷ್ಠೆ ಏ.2ರಂದು ಶ್ರೀ ದೇವರಿಗೆ ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಪುಷ್ಪರಥ ಸಮರ್ಪಣೆ, ಏ.3ರಂದು ನೂತನ ಬ್ರಹ್ಮರಥಕ್ಕೆ ಕಲಶ, ವರ್ಷಾವಧಿ ಉತ್ಸವ ಪ್ರಾರಂಭ, ಧ್ವಜಾರೋಹಣ, ಏ.11 ರಂದು ಬ್ರಹ್ಮರಥೋತ್ಸವ, ಏ.12ರಂದು ಅವಕೃತ, ಏ.13ರಂದು ಭದ್ರಕಾಳಿ ಅಮ್ಮ ನವರ ಪೂಜೆ ನೆರವೇರಲಿವೆ. ಭಕ್ತಾಧಿಗಳು ಈ ಶುಭಕಾರ್ಯದಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಸುಬ್ರಹ್ಮಣ್ಯ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಹೇಮಂತ್ ರೈ ಪ್ರಧಾನ ಅರ್ಚಕ ರಾಘವೇಂದ್ರ ಪ್ರಸಾದ್ ಭಟ್ ತೋಟಂತಿಲ, ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಧಾಕೃಷ್ಣ ರೈ ಪರಾರಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಮುತ್ತಪ್ಪ ಪೂಜಾರಿ, ಬ್ರಹ್ಮ ಕಲಶೋತ್ಸವ ಹಸಿರುವಾಣಿ ಪ್ರಧಾನ ಸಂಚಾಲಕ ಜನಾರ್ದನ ಗೌಡ ಕಯ್ಯಪೆ, ಕೆ. ವಿಠಲ್ ರೈ ಕೊಣಾಲು ಗುತ್ತು
ಉಪಸ್ಥಿತರಿದ್ದರು.