ಶ್ರೀ ಕ್ಷೇತ್ರ ಧರ್ಮಸ್ಥಳ : ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಕರ್ನಾಟಕ ರಾಜ್ಯದಲ್ಲಿ ಗ್ರಾಮಾಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತೀಯ ಜೀವ ವಿಮಾ ನಿಗಮವು ತಮ್ಮ ವಿಮಾ ಸೇವೆಯನ್ನು ಗ್ರಾಮ ಗ್ರಾಮಗಳಿಗೆ ನೀಡುತ್ತಿರುವ ಪಾಲುದಾರ ಸಂಸ್ಥೆಯಾದ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಜಂಟಿಯಾಗಿ ಸೇರಿಕೊಂಡು ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು. ಭಾರತೀಯ ಜೀವ ವಿಮಾ ನಿಗಮ ಮತ್ತು ಗ್ರಾಮಾಭಿವೃದ್ಧಿ ಯೋಜನೆ ಕರ್ನಾಟಕ ರಾಜ್ಯದ ಗ್ರಾಮದಲ್ಲಿರುವ ಆರ್ಥಿಕ ಹಿಂದುಳಿದ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ವಿಶೇಷ ಕಿರು ಮೈಕ್ರೋ ಇನ್ಸೂರೆನ್ಸ್ ಸೇವೆ ನೀಡುವ ಮೂಲಕ ದೇಶಕ್ಕೆ ಮಾದರಿ ವ್ಯವಸ್ಥೆಯಾಗಿದೆ. ಈ ಸಾಧನೆಯೊಂದಿಗೆ ಅನೇಕ ಕ್ಷೇತ್ರಗಳಲ್ಲಿ ಪೂಜ್ಯರು ನೀಡಿದ ಅನನ್ಯ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಮೂರು ಸಂಸ್ಥೆಗಳು ಭಾರತೀಯ ಅಂಚೆ ಇಲಾಖೆಯಿಂದ ಶ್ರೀ ಹೆಗ್ಗಡೆಯವರ ಅಂಚೆ ಚೀಟಿಯನ್ನು ಶ್ರೀ ಹೆಗ್ಗಡೆಯವರ ಜನ್ಮ ದಿನದಂದು ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು. ಶೃತಿ ಎಂಬ ರೋಬೋ ಅಂಚೆ ಚೀಟಿಯನ್ನು ಬಿಡುಗಡೆಗೆ ವೇದಿಕೆಗೆ ತಂದುಕೊಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಎಪಿಜೆ ಅಬ್ದುಲ್ ಕಲಾಂರವರ ಮೊಮ್ಮಗ, ಡಾ. ಎಪಿಜೆ ಅಬ್ದುಲ್ ಕಲಾಂ ಪ್ರತಿಷ್ಠಾನದ ಸಹಸ್ಥಾಪಕರು ಮತ್ತು ವ್ಯವಸ್ಥಾಪಕ ಟ್ರಸ್ಟಿಗಳಾದ ಎಪಿಜೆಎಂಜೆ ಶೇಯ್ಕ್ ಸಲೀಂರವರು ಅಬ್ದುಲ್ ಕಲಾಂ ಮತ್ತು ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಚಿಂತನೆಗಳು ಒಂದೇ ದಾರಿಯಲ್ಲಿ ಸಾಗಿದ್ದು, ಈ ಸಂಬAಧವನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಅಬ್ದುಲ್ ಕಲಾಂ ಫೌಂಡೇಶನ್ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಮುಂದಿನ ದಿನಗಳಲ್ಲಿ ಉತ್ತಮ ಸಂಬಂಧವನ್ನು ಬೆಸೆಯಲಿದೆ. ಹಾಗೆಯೇ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಅಬ್ದುಲ್ ಕಲಾಂ ಪ್ರತಿಷ್ಠಾನದ ಸಂಗ್ರಹಾಲಯದಿAದ ಅಬ್ದುಲ್ ಕಲಾಂರವರು ಬಳಸುತ್ತಿದ್ದ ಅಮೂಲ್ಯ ವಸ್ತುವನ್ನು ಕೊಡುಗೆಯಾಗಿ ನೀಡುವುದಾಗಿ ತಿಳಿಸಿದರು.
ಮರ್ಸಿಡಿಸ್ ಬೆಂಝ್ ಕಾರು ಕಂಪನಿಯ ಪ್ರಧಾನ ವ್ಯವಸ್ಥಾಪಕರಾದ ಸಂಜಯ್ ಕೊಚರ್ ಮಾತನಾಡಿ ಕಾರ್ ಮ್ಯೂಸಿಯಂನಲ್ಲಿ ಅಪೂರ್ವ ಕಾರುಗಳ ಸಂಗ್ರಹ ನೋಡಿ ಸಂತೋಷವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉಡುಪಿಯ ಮುಖ್ಯ ಅಂಚೆ ಅಧಿಕ್ಷಕರಾದ ರಮೇಶ್ ಪ್ರಭುರವರು ಭಾರತೀಯ ಅಂಚೆ ಇಲಾಖೆ ವತಿಯಿಂದ ಹೊರತಂದ ಶ್ರೀ ಹೆಗ್ಗಡೆಯವರ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಭಾರತೀಯ ಜೀವ ವಿಮಾ ನಿಗಮದ ದಕ್ಷಿಣ ವಲಯದ ಹಿರಿಯ ವಲಯಾಧಿಕಾರಿ ಪುನಿತ್ ಕುಮಾರ್ ಮಾತನಾಡಿ ಭಾರತೀಯ ಜೀವವಿಮಾ ನಿಗಮವು ಕಳೆದ ೧೭ ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಜನರ ಆರ್ಥಿಕ ಸ್ವಾವಲಂಬನೆಗಾಗಿ ಆರೋಗ್ಯ, ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಲ್ಲಿ ಉತ್ತಮ ಸೇವೆ ನೀಡುತ್ತಿದೆ. ದೇಶದೆಲ್ಲೆಡೆ ೧೫ ಲಕ್ಷ ಬಿಮಾ ಸಖಿಯರು ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಸಂಬಳದ ಜೊತೆ ಕಮೀಶನ್ ಕೂಡಾ ನೀಡಲಾಗುತ್ತದೆ, ದೇಶದೆಲ್ಲೆಡೆ ೨೬ ಕೋಟಿ ವಿಮಾ ಪಾಲಿಸಿದಾರರಿದ್ದು, ಹೆಚ್ಚಿನ ಜನರು ವಿಮಾ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಜೀವವಿಮಾ ಕಂಪೆನಿಯಿAದಾಗಿ ಸಾರ್ವಜನಿಕರು ಇಂದು ಜಾಗೃತರಾಗಿದ್ದು, ತಾವಾಗಿಯೆ ವಿಮೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಸಾಲಗಾರರಿಗೂ ವಿಮೆ ಮಾಡಿ ಭದ್ರತೆ ನೀಡುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡುತ್ತಾ ಜೀವವಿಮೆಯು ನಮ್ಮ ಕಷ್ಟಕಾಲದಲ್ಲಿ ಯೋಗಕ್ಷೇಮ ಕಾಪಾಡಲು ಸಹಕಾರಿಯಾಗಿದೆ ಎಂದರು. ಸಂಕಷ್ಟ ಪರಿಹಾರದಲ್ಲಿ ಜೀವವಿಮೆ ಕಲ್ಪವೃಕ್ಷದಂತೆ ಸಹಕಾರಿಯಾಗಿದೆ ಎಂದರು. ಪೂಜ್ಯರನ್ನು ಎಲ್ಐಸಿ, ಭಾರತೀಯ ಅಂಚೆ ಇಲಾಖೆ, ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪೂಜ್ಯರ ಸಾಧನೆಯ ಮೆಲುಕು ನೋಟದ ದೃಶ್ಯವನ್ನು ಪ್ರಸಾರ ಪಡಿಸಲಾಯಿತು. ಇಂದು ರಾಜ್ಯದಾದ್ಯಂತ ಸೇವಾದಿನವನ್ನಾಗಿ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಕ್ಷೇಮವನದ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಶ್ರದ್ಧಾ ಅಮಿತ್, ಯೋಜನೆಯ ಟ್ರಸ್ಟಿಗಳಾದ ಉದಯ ಕುಮಾರ್ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್., ಪುತ್ತೂರು ಅಂಚೆ ಅಧೀಕ್ಷಕರಾದ ಕೆ. ರವೀಂದ್ರ ನಾಯಕ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ದಿನವೇ ಪೂಜ್ಯರ ಜನ್ಮದಿನ ಆಗಿರುವುದು ವಿಶೇಷವಾಗಿದೆ. ಎಲ್ಐಸಿಯ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್. ಭಟ್ ಸ್ವಾಗತಿಸಿದರು. ಭಾರತೀಯ ಜೀವ ವಿಮಾ ನಿಗಮ ಉಡುಪಿ ವಿಭಾಗದ ಮೈಕ್ರೋ ಇನ್ಶುರೆನ್ಸ್ ಮೆನೆಜರ್ ದಿನೇಶ್ ಪ್ರಭು ಧನ್ಯವಾದವಿತ್ತರು. ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೆಜಸ್ ನಿರೂಪಿಸಿದರು.