ಉಜಿರೆ: ಹಣ ಮತ್ತು ಬಹುಮಾನಕ್ಕಾಗಿ ಸಾಹಿತ್ಯ ರಚನೆ ಸಲ್ಲದು. ಸಮಾಜ ಕಲ್ಯಾಣಕ್ಕಾಗಿ ಪ್ರೀತಿಯಿಂದ ಸಾಹಿತ್ಯ ರಚನೆ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಪ್ರೇಮಶೇಖರ ಹೇಳಿದರು.ಅವರು ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಬುಧವಾರ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಸಾಹಿತಿಗಳು ಬದುಕಿನ ವಾಸ್ತವದ ಬಗ್ಗೆ ಸಾಹಿತ್ಯಕೃತಿಗಳಲ್ಲಿ ಪ್ರತಿಬಿಂಬಿಸುವುದಿಲ್ಲ. ಏನು ನಡೆಯುತ್ತಿದೆಯೋ ಅದಕ್ಕೆ ವಿರುದ್ಧವಾಗಿ ಬರೆಯುತ್ತಾರೆ. ದೇಶದ ಅಸ್ತ್ವಿತ್ವ. ಭವಿಷ್ಯದ ಬಗ್ಗೆ ಮುಂದಿನ ಸವಾಲುಗಳ ಬಗ್ಗೆ ಸಾಹಿತ್ಯ ಕೃತಿಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ಬಹುಮಾನಕ್ಕಾಗಿ, ಕೀರ್ತಿಗಾಗಿ ಹಾಗೂ ಹಣ ಸಂಪಾದನೆಗಾಗಿ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಹೊಸ ವಿಚಾರಗಳು, ಹೊಸ ಪಾತ್ರಗಳು, ಹೊಸ ಸನ್ನಿವೇಶಗಳು ದೊರಕಿದಾಗ ಪರಕಾಯ ಪ್ರವೇಶ ಮಾಡಿ ಸಾಹಿತ್ಯ ಕೃತಿಗಳನ್ನು ಸಮಾಜಕಲ್ಯಾಣಕ್ಕಾಗಿ ಪ್ರೀತಿಯಿಂದ ಬರೆಯಬೇಕು. ಆಗ ಮಾತ್ರ ಮಿದುಳು ಸಕ್ರಿಯವಾಗಿ ಸಾಹಿತಿಗಳು ಮಾನಸಿಕವಾಗಿ ಸದಾ ಚೈತನ್ಯಶೀಲರಾಗುತ್ತಾರೆ.ಬರೇ ಪ್ರೀತಿ, ಪ್ರೇಮ ಅಲ್ಲದೆ ಬದುಕಿನ ಸೋಲು, ಸವಾಲುಗಳು, ಅವಹೇಳನ, ಆತಂಕಗಳ ಬಗ್ಗೆಯೂ ಸಾಹಿತ್ಯ ರಚನೆ ಮಾಡಬೇಕು.
ಬದುಕು ಹೇಗಿದೆಯೋ ಹಾಗೆ ಚಿತ್ರಿಸುವುದು ನವೋದಯ ಸಾಹಿತ್ಯವಾದರೆ, ಮುಂದೆ ಹೇಗೆ ಬದಲಾಗಬೇಕು ಎಂದು ಬರೆಯುವುದು ಪ್ರಗತಿಪರ ಸಾಹಿತ್ಯ. ವಿದೇಶದಲ್ಲಿ ಉದ್ಯೋಗ ಮಾಡಿ ಅಸ್ತಿತ್ವಕ್ಕಾಗಿ ಸಾಹಿತ್ಯ ರಚನೆ ಮಾಡುವುದು ನವ್ಯ ಸಾಹಿತ್ಯವಾಗಿದೆ. ಸುಂದರ ಬದುಕಿಗಾಗಿ ಹೋರಾಡಬೇಕು ಎಂದು ಬರೆಯುವುದು ಬಂಡಾಯ ಸಾಹಿತ್ಯವಾಗಿದೆ ಎಂದು ಅವರು ಹೇಳಿದರು.
ಇಂದು ಮುದ್ರಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆ ಹಾಗೂ ಆಧುನೀಕರಣದಿಂದಾಗಿ ಹೆಚ್ಚು ಕೃತಿಗಳು ಪ್ರಕಟವಾಗುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಇಂದು ಕಾದಂಬರಿ ಓದುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಕಥೆ ಬರೆಯುವವರ ಸಂಖ್ಯೆ ಮತ್ತು ಓದುವವರ ಸಂಖ್ಯೆ ಹೆಚ್ಚಾಗಿದೆ. ಕಥಾ ಸಾಹಿತ್ಯ ಅರ್ಥಪೂರ್ಣವಾಗಿ ಬೆಳೆಯುತ್ತಿದೆ. ಹೃದಯದಿಂದ, ಪ್ರೀತಿಯಿಂದ ಬಂದ ಆಲೋಚನೆಗಳನ್ನು ಬಳಸಿ ಉತ್ತಮ ಕಥೆಗಳನ್ನು ಬರೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಉಪನ್ಯಾಸಗಳು: ಬೆಂಗಳೂರಿನ ಶಾಂತಾ ನಾಗಮಂಗಲ, ಡಾ. ರಘು, ವಿ., ಧಾರವಾಡದ ಡಾ. ಬಿ. ಎಂ. ಶರಭೇಂದ್ರ ಸ್ವಾಮಿ ಸಾಹಿತ್ಯ ಮತ್ತು ಸಾರ್ಥಕ ಬದುಕಿನ ಬಗ್ಗೆ ಉಪನ್ಯಾಸ ನೀಡಿದರು.
ರಾಜಶ್ರೀ ಎಸ್. ಹೆಗ್ಡೆ ಧನ್ಯವಾದವಿತ್ತರು.
ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಉನ್ಯಾಸಕರಾದ ಡಾ. ಶ್ರೀಧರ ಭಟ್ ಮತ್ತು ಡಾ. ದಿವಾಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.