ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳನೆಯ ಮೇಳದ ಪಾದಾರ್ಪಣೆ ನವೆಂಬರ್ 16ರಂದು ನಡೆಯಲಿದೆ ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 15ರಂದು ಮಧ್ಯಾಹ್ನ 3 ಗಂಟೆಗೆ ಬಜಪೆಯಿಂದ ಸ್ತಬ್ಧಚಿತ್ರಗಳಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ, ಭಕ್ತರಿಂದ ಅರ್ಪಿತವಾದ ದೇವರ ಪರಿಕರಗಳು, ಕಿರೀಟಗಳು, ತೊಟ್ಟಿಲು, ಚಿನ್ನ-ಬೆಳ್ಳಿಯ ಆಯುಧಗಳನ್ನು ವೈಭವದ ಮೆರವಣಿಗೆಯಲ್ಲಿ ಕಟೀಲಿಗೆ ತರಲಾಗುವುದಾಗಿ ಹೇಳಿದರು.
ಬಜಪೆಯಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೆರವಣಿಗೆಯನ್ನು ಉದ್ಘಾಟಿಸಲಿದ್ದು, ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಂ ಭಟ್, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್, ಮಿಥುನ್ ರೈ ಹಾಗೂ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಮೆರವಣಿಗೆಯಲ್ಲಿ ಸುಮಾರು 15 ರಿಂದ 20 ಸಾವಿರ ಭಕ್ತರ ಭಾಗವಹಿಸುವ ನಿರೀಕ್ಷೆಯಿದೆ. ವೇದಘೋಷ, ಚೆಂಡೆ ತಂಡಗಳು, ವಾದ್ಯ, ಕೊಂಬು, ಹುಲಿವೇಷ, ಭಜನೆಗೋಷ್ಠಿ ಸೇರಿದಂತೆ ವೈಭವದ ಮೆರವಣಿಗೆಯು ಎಕ್ಕಾರಿನಿಂದ ಕಟೀಲುವರೆಗೆ ನಡೆಯಲಿದೆ.
ಧಾರ್ಮಿಕ ವಿಧಿಗಳ ಅಂಗವಾಗಿ ನವೆಂಬರ್ 14ರಂದು ಚಂಡಿಕಾಹೋಮ, ಗಣಯಾಗ, ನವೆಂಬರ್ 16ರಂದು ಪೂಜಾ ಕಿರೀಟಗಳ ಸ್ಥಾಪನೆ, ತಾಳಮದ್ದಲೆ, ಗೆಜ್ಜೆ ಕಟ್ಟುವುದು ಸೇರಿದಂತೆ ಮೇಳದ ಆರಂಭದ ವಿಧಿಗಳು ನಡೆಯಲಿವೆ. ಸಂಜೆ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಾಂಸ್ಕೃತಿಕ ಸಚಿವ ಶಿವರಾಜ ತಂಗದಗಿ, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.