ಮುಲ್ಕಿ: ಮಂಗಳೂರಿನ ಪ್ರತಿಷ್ಠಿತ ತಿರುವೈಲ್ ಗುತ್ತು ಕುಟುಂಬದ ಯುವ ಉದ್ಯಮಿ, ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (25) ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಅವರ ಮೃತದೇಹ ಶುಕ್ರವಾರ ಬೆಳಗ್ಗೆ ಶಾಂಭವಿ ನದಿಯಲ್ಲಿ ಪತ್ತೆಯಾಗಿದ್ದು, ಮೂಲಗಳ ಪ್ರಕಾರ, ಯುವ ಉದ್ಯಮಿ ಅಭಿಷೇಕ್ ಆಳ್ವ ಗುರುವಾರ ಮುಂಜಾನೆ 3:30ರ ಸುಮಾರಿಗೆ ಮಂಗಳೂರಿನಿಂದ ತಮ್ಮ ಕಾರಿನಲ್ಲಿ ಹೊರಟಿದ್ದರು. ಬಪ್ಪನಾಡು ಸೇತುವೆ ಬಳಿ ಕಾರನ್ನು ನಿಲ್ಲಿಸಿ, ಶಾಂಭವಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ.
ಬಪ್ಪನಾಡು ಚೆಕ್ಟೋಸ್ಟ್ ಬಳಿಯ ಸಿಸಿ ಕ್ಯಾಮೆರಾದಲ್ಲಿ ಅವರ ಕಾರು ಪ್ರಯಾಣಿಸಿದ ದೃಶ್ಯ ದಾಖಲಾಗಿದೆ.ಪುತ್ರ ರಾತ್ರಿವರೆಗೂ ಮನೆಗೆ ಬಾರದಿದ್ದಾಗ ತಂದೆ ನವೀನ್ ಚಂದ್ರ ಆಳ್ವ ಅವರು ಪಡುಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿ ಶೋಧ ಕಾರ್ಯ ಆರಂಭಿಸಿದ್ದರು. ಹುಡುಕಾಟದ ವೇಳೆ ಮುಲ್ಕಿಯ ಬಪ್ಪನಾಡು ಸೇತುವೆ ಬಳಿ ಅಭಿಷೇಕ್ ಅವರ ಕಾರು ಪತ್ತೆಯಾಗಿತ್ತು. ಗುರುವಾರ ರಾತ್ರಿ ಮುಳುಗುತಜ್ಞ ಈಶ್ವರ ಮಲ್ಪೆ, ಮಂಗಳೂರು ಎಸಿಪಿ ಶ್ರೀಕಾಂತ್, ಮುಲ್ಕಿ ಹಾಗೂ ಪಡುಬಿದ್ರೆ ಪೊಲೀಸರು ಮಧ್ಯರಾತ್ರಿವರೆಗೂ ಶಾಂಭವಿ ನದಿಯಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದರೂ ಅಭಿಷೇಕ್ ಪತ್ತೆಯಾಗಿರಲಿಲ್ಲ.
ಆದರೆ, ಶುಕ್ರವಾರ ಬೆಳಗ್ಗೆ ಸ್ಥಳೀಯರಾದ ಸಚಿನ್ ನಾಯಕ್ ಅವರು ಬೋಟ್ ಮೂಲಕ ಶೋಧ ಕಾರ್ಯ ನಡೆಸುತ್ತಿದ್ದಾಗ, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರ ಶಾನುಭಾಗರ ಕುದ್ರು ಬಳಿ ಅಭಿಷೇಕ್ ಆಳ್ವ ಅವರ ಮೃತದೇಹ ಪತ್ತೆಯಾಗಿದೆ. ಕೂಡಲೇ ಸ್ಥಳೀಯ ಮುಳುಗುತಜ್ಞರು, ಈಜುಗಾರರು ಮತ್ತು ಎನ್.ಡಿ.ಆರ್.ಎಫ್. ಸಿಬ್ಬಂದಿ ಸಹಕಾರದೊಂದಿಗೆ ಮೃತದೇಹವನ್ನು ನದಿಯಿಂದ ಮೇಲೆತ್ತಿ, ಅಂಬುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.