image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಂಗಳೂರಿನಲ್ಲಿ ಶೀಘ್ರದಲ್ಲೇ ಬ್ಯಾರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಪ್ರಾರಂಭ: ಸ್ಪೀಕರ್ ಯು.ಟಿ. ಖಾದರ್

ಬೆಂಗಳೂರಿನಲ್ಲಿ ಶೀಘ್ರದಲ್ಲೇ ಬ್ಯಾರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಪ್ರಾರಂಭ: ಸ್ಪೀಕರ್ ಯು.ಟಿ. ಖಾದರ್

ಮಂಗಳೂರು:ದೂರದ ಕರಾವಳಿಯಿಂದ ಬೆಂಗಳೂರಿಗೆ ಉದ್ಯೋಗ ಮತ್ತು ವಿವಿಧ ಉದ್ದೇಶಗಳಿಗಾಗಿ ಬಂದು ನೆಲೆಸಿರುವ ಬ್ಯಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಕೋನದಿಂದ ಬೆಂಗಳೂರಿನಲ್ಲಿ ಅತೀ ಶೀಘ್ರದಲ್ಲೇ 'ಬ್ಯಾರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ'ಯ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬ್ಯಾರಿ ಸಮುದಾಯದ ಎಲ್ಲ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.

ಮಂಗಳವಾರ  ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಹಿಂದೂಸ್ತಾನ್ ಕಾಂಪ್ಲೆಕ್ಲ್‌ನಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿ(ಬಿಸಿಸಿ)ಯ ನೂತನ ಕಚೇರಿಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿ,ಕರಾವಳಿಯ ಬ್ಯಾರಿ ಸಮುದಾಯ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳುವವರು. ಇತ್ತೀಚಿನ ವರ್ಷಗಳಲ್ಲಿ ಸಮುದಾಯದ ಯುವಕರು ಬೆಂಗಳೂರಿಗೆ ಉದ್ಯೋಗ, ವ್ಯಾಪಾರ ಸೇರಿದಂತೆ ನಾನಾ ಉದ್ದೇಶಗಳಿಗಾಗಿ ಬಂದು ತಮ್ಮದೇ ಅಸ್ತಿತ್ವವನ್ನು ಕಂಡುಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಾನು ರಾಜಕೀಯದಲ್ಲಿ ಸ್ಪೀಕರ್ ಹುದ್ದೆಗೆ ಏರುವುದಕ್ಕೆ ನಮ್ಮ ಬ್ಯಾರಿ ಸಮುದಾಯವು ಸೇರಿದಂತೆ ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸದ ಜೊತೆಗೆ ಹಿರಿಯರ ಆಶೀರ್ವಾದವೂ ಕಾರಣ. ಸಮುದಾಯದ ಯುವಕರೇ ಕಟ್ಟಿಕೊಂಡಿರುವ ಬ್ಯಾರಿಸ್ ಸೆಂಟ್ರಲ್ ಕಮಿಟಿ(ಬಿಸಿಸಿ)ಯು ಬೆಂಗಳೂರಿನಲ್ಲಿರುವ ಬ್ಯಾರಿ ಸಮುದಾಯದ ಎಲ್ಲ ಕಷ್ಟಕ್ಕೆ ತಮ್ಮ ನಿಭಿಡತೆಯ ಮಧ್ಯೆಯೂ ಸ್ಪಂದಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಸಮುದಾಯದ ಏಳಿಗೆಗಾಗಿ ದುಡಿಯುತ್ತಾ, ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸುತ್ತಿದೆ ಎಂಬುದಕ್ಕೆ ಕಳೆದ ವರ್ಷ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬ್ಯಾರಿ ಕೂಟವೇ ಸಾಕ್ಷಿ ಎಂದು ಸ್ಪೀಕರ್ ಶ್ಲಾಘಿಸಿದರು.

ತಮ್ಮ ಭಾಷಣದಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿರುವ ಅಕ್ರಮದ ಆರೋಪಗಳ ಕುರಿತಾಗಿ ಮಾತನಾಡಿದ ಯು ಟಿ ಖಾದರ್, "ಬ್ಯಾರಿ ಸಮುದಾಯದ ಹೆಸರನ್ನು ಯಾವತ್ತೂ ಕೆಡಿಸಿಲ್ಲ. ಟೀಕೆ ಮಾಡುವವರು ಮಾಡುತ್ತಲೇ ಇರುತ್ತಾರೆ, ಕೆಲಸಗಳು ನೆನಪಿನಲ್ಲಿರುತ್ತದೆ. ವಿಧಾನಸೌಧದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಕ್ಕೆ ಇವತ್ತು ಟೀಕೆಗಳು ಬರುತ್ತಿವೆ. ವಿಧಾನಸೌಧದಲ್ಲಿ ಪಾಳುಬಿದ್ದಿದ್ದ ಬಾಗಿಲನ್ನು ಸರಿ ಮಾಡಿಸಿದ್ದಕ್ಕೆ ಇವತ್ತು ಕೆಲವರು ಪ್ರಶ್ನಿಸುತ್ತಿದ್ದಾರೆ. ಊಟ ಕೊಟ್ಟದ್ದನ್ನೂ ಈಗ ಪ್ರಶ್ನಿಸುತ್ತಿದ್ದಾರೆ.  ತಿನ್ನುವಾಗ ಯಾರೂ ಕೇಳಿರಲಿಲ್ಲ. ಟೀಕೆ ಮಾಡುವವರಿಗೆಲ್ಲ ಯಾರು ಉತ್ತರ ಕೊಟ್ಟುಕೊಂಡು ಹೋಗೋದು? ಕೆಲಸ ಮಾಡುವುದಕ್ಕೆ ಶ್ರಮ, ಯೋಚನೆ, ಯೋಜನೆಯ ಅಗತ್ಯವಿದೆ. ಆದರೆ, ಟೀಕೆ ಮಾಡುವುದಕ್ಕೆ ಇವ್ಯಾವುದೂ ಬೇಕಿಲ್ಲ. ನಾನು ಯಾವತ್ತೂ ಕೂಡ ಬ್ಯಾರಿ ಸಮುದಾಯದ ಹೆಸರನ್ನು ಕೆಡಿಸಿಲ್ಲ, ಇನ್ನು ಮುಂದೆಯೂ ಕೆಡಿಸಲ್ಲ. ಈ ಬಗ್ಗೆ ಈಗಾಗಲೇ ನನ್ನ ಕ್ಷೇತ್ರದ ಜನರ ಸಹಿತ ಎಲ್ಲರಲ್ಲಿಯೂ ತಿಳಿಸಿದ್ದೇನೆ" ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ