image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತುಳು ಸಾಹಿತ್ಯ ಓದಿನ ಮೂಲಕ ಸಾಂಸ್ಕೃತಿಕ ಬದುಕಿನ ಪರಿಚಯ: ಭಾಸ್ಕರ್ ರೈ ಕುಕ್ಕುವಳ್ಳಿ

ತುಳು ಸಾಹಿತ್ಯ ಓದಿನ ಮೂಲಕ ಸಾಂಸ್ಕೃತಿಕ ಬದುಕಿನ ಪರಿಚಯ: ಭಾಸ್ಕರ್ ರೈ ಕುಕ್ಕುವಳ್ಳಿ

ಮಂಗಳೂರು: ತುಳು ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ತುಳು ಭಾಷೆಯ ಹಾಗೂ ತುಳುನಾಡಿನ   ಸಾಂಸ್ಕೃತಿಕ ಬದುಕಿನ    ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುವುದು,  ರಾಮಾಯಣ ಕಾಲದಿಂದ ಇಂದಿನ ಆಧುನಿಕ ಸಂದರ್ಭದ ಕಾಲಘಟ್ಟದ ತನಕದ ಜ್ಞಾನ  ಪರಂಪರೆಯ ಅರಿವನ್ನು ಓದಿನ ಮೂಲಕ ನಮ್ಮದಾಗಿಸಿಕೊಳ್ಳಲು ಸಾಧ್ಯವಿದೆ  ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕರಾದ  ಭಾಸ್ಕರ  ರೈ ಕುಕ್ಕುವಳ್ಳಿ   ಅವರು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತಲಪಾಡಿಯ ಶಾರದಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ ‘ ಅಭಿಯಾನದ ಹತ್ತನೆ  ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೀನ ಜೆ. ಪಣಿಕ್ಕರ್   ಅವರು ಮಾತನಾಡಿ, ತುಳು ಭಾಷೆ , ಸಾಹಿತ್ಯದ , ಸಂಸ್ಕ್ರತಿ ಬಗ್ಗೆ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ' ಕಾರ್ಯಕ್ರಮ ಒಂದು ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮ  ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳು ಭಾಷೆಯಲ್ಲಿ ಪ್ರಕಟಗೊಂಡ ಸಾಹಿತ್ಯದ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕು ಅನ್ನುವ ಆಶಯದೊಂದಿಗೆ ‘ಬಲೆ ತುಳು ಓದುಗ “ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ   ಮಸ್ಕತ್ ತುಳುಕೂಟದ ಮಾಜಿ ಅಧ್ಯಕ್ಷ  ದಯಾನಂದ ಕಾವೂರು , ಶಾರದಾ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾದ್ಯಾಪಕಿ  ಅಮಿತಾ ಆಳ್ವ,  ವಿದ್ಯಾರ್ಥಿ ಸಂಚಾಲಕಿ ವರ್ಷ ವಿ.ಎಸ್ ಉಪಸ್ಥಿತರಿದ್ದರು.

 ಅಕಾಡೆಮಿಯ ಸದಸ್ಯ  ಪಾಂಗಾಳ ಬಾಬು ಕೊರಗ ಕಾರ್ಯಕ್ರಮ  ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾರದಾ ಕಾಲೇಜಿನ 55 ವಿದ್ಯಾರ್ಥಿಗಳು ಅಕಾಡೆಮಿಯ ಗ್ರಂಥಾಲಯದಲ್ಲಿ ತುಳು ಸಾಹಿತ್ಯ ಕೃತಿಗಳನ್ನು ಓದಿ ಸಂಜೆಯ ಸಮಾರೋಪ ಕಾರ್ಯಕ್ರಮದಲ್ಲಿ  ತಮ್ಮ ಅಭಿಪ್ರಾಯ ಹಂಚಿಕೊಂಡರು.

Category
ಕರಾವಳಿ ತರಂಗಿಣಿ