ಬೆಂಗಳೂರು : ಆರ್ ಎಸ್ಎಸ್ ನಿರ್ಬಂಧದ ಬಗ್ಗೆ ಪ್ರಿಯಾಂಕ ಖರ್ಗೆ ಹೇಳಿರುವ ಮಾತು ಸರಿಯಾಗಿಯೇ ಇದ್ದು, ಸಮಾಜದಲ್ಲಿ ಸಾಮರಸ್ಯ, ಸಾಂಸ್ಕೃತಿಕ ಮೌಲ್ಯಗಳನ್ನು ಗಟ್ಟಿಗೊಳಿಸಲು ಸರ್ಕಾರಿ ಶಾಲೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರೆಸ್ಸೆಸ್ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ. ದ.ಕ. ಜಿಲ್ಲೆಯಲ್ಲೂ ವಾತಾವರಣ ಕಲುಷಿತಗೊಳ್ಳಲು ಆರೆಸ್ಸೆಸ್ ಪ್ರಭಾವವೇ ಕಾರಣ ಎಂದು ಆರೋಪಿಸಿದರು. ಕಾಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವನ್ನು ಒಪ್ಪಿಕೊಂಡವರು ನಾವು, ಮತೀಯವಾದಿ ಸಂಘಟನೆ ಆರೆಸ್ಸೆಸ್ ಚಟುವಟಿಕೆ ವಿರೋಧಿಸುತ್ತ ಬಂದಿದ್ದೇವೆ. ರಾಹುಲ್ ಗಾಂಧಿಯವರು ಆರೆಸ್ಸೆಸ್ ಗೆ ಹೆದರುವವರು ನಮ್ಮ ಪಕ್ಷದಲ್ಲಿ ಇರುವುದು ಬೇಡವೆಂದು ಈಗಾಗಲೇ ಹೇಳಿದ್ದಾರೆ. ಸಮಾಜದಲ್ಲಿ ನಮ್ಮ ನಿಲುವನ್ನು ಹೇಳುವುದರಲ್ಲಿ ಗಟ್ಟಿತನ ಇರಬೇಕು. ಆರೆಸ್ಸೆಸ್ ಅನ್ನು ಎರಡು ಬಾರಿ ಸರ್ದಾರ್ ವಲ್ಲಭಭಾಯಿ ಪಟೇಲರು ನಿಷೇಧ ಮಾಡಿದ್ದರು. ಬಿಜೆಪಿಯವರು ಪಟೇಲರು ಮಾಡಿದ ತೀರ್ಮಾನವನ್ನು ಒಪ್ಪಿಕೊಳ್ಳುತ್ತಾರೆಯೇ? ಇವರು ಪಟೇಲರ ಮೂರ್ತಿ ಮಾಡಿದ್ದು ಬಿಟ್ಟರೆ ಅವರ ನೀತಿಯನ್ನು ಅನುಸರಿಸುತ್ತಾರೆಯೇ ಎಂದು ಪ್ರಶ್ನಿಸಿದರು.