image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್ ಸಿಡಿಸಿಸಿ ಬ್ಯಾಂಕ್ ವತಿಯಿಂದ ನಗರ 'ಪೊಲೀಸ್ ಇಲಾಖೆಗೆ ಎರಡು ಸ್ಕಾರ್ಪಿಯೋ ವಾಹನ' ಹಸ್ತಾಂತರ

ಎಸ್ ಸಿಡಿಸಿಸಿ ಬ್ಯಾಂಕ್ ವತಿಯಿಂದ ನಗರ 'ಪೊಲೀಸ್ ಇಲಾಖೆಗೆ ಎರಡು ಸ್ಕಾರ್ಪಿಯೋ ವಾಹನ' ಹಸ್ತಾಂತರ

ಮಂಗಳೂರು: ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಬ್ಯಾಂಕ್ ವತಿಯಿಂದ ಕೊಡುಗೆಯಾಗಿ ಎರಡು ಸ್ಕಾರ್ಪಿಯೋ ವಾಹನಗಳನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಯವರಿಗೆ ಶನಿವಾರ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಎಸ್ ಸಿಡಿಸಿಸಿ  ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್ .ರಾಜೇಂದ್ರ ಕುಮಾರ್  ಅಧ್ಯಕ್ಷ ತೆ ವಹಿಸಿ  ಮಾತನಾಡುತ್ತಾ, ಸಹಕಾರಿ ಬ್ಯಾಂಕುಗಳು ಜನರಿಗಾಗಿ ಕೆಲಸ ಮಾಡುತ್ತಿದೆ. ಮೇ.10ರಂದು ಮಂಗಳೂರಿನಲ್ಲಿ ನಡೆದ ನವೋದಯ ಸ್ವಸಹಾಯ ಗುಂಪುಗಳ ಸಮಾವೇಶ ನಡೆದಾಗ ಪೊಲೀಸ್ ಇಲಾಖೆ ಪಟ್ಟ ಶ್ರಮ ಮರೆಯಲಾಗದು. ಮೂರು ದಿನ ಅಲ್ಲೇ ಇದ್ದು ಯಾವುದೇ ಕಪ್ಪು ಚುಕ್ಕೆ ಬರದಂತೆ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದು ಅವರು ನೆನಪಿಸಿಕೊಂಡರು. ದೇಶ ರಕ್ಷಣೆ ಸೈನಿಕರು ಮಾಡಿದರೆ ರಾಜ್ಯದ ರಕ್ಷಣೆ ಪೊಲೀಸರು ಮಾಡುತ್ತಾರೆ, ಸಮಯದ ಮಿತಿಯೇ ಇಲ್ಲದ ಪೊಲೀಸ್ ಇಲಾಖೆಗೆ ಸಹಕಾರ ನೀಡುವುದೂ ನಮ್ಮ ಜವಾಬ್ದಾರಿ, ಮುಂದಿನ ದಿನಗಳಲ್ಲೂ ಇಲಾಖೆ ಜೊತೆಗಿದ್ದೇವೆ ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್  ಭರವಸೆ ನೀಡಿದರು.  

ಇದೇ ಸಂದರ್ಭದಲ್ಲಿ ಕಮಿಷನರ್ ಸುಧೀರ್ ರೆಡ್ಡಿ ಮಾತನಾಡಿ,  ಇಲಾಖೆಗೆ ವಾಹನಗಳ ಅವಶ್ಯಕತೆ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳುತ್ತಾ, ತಾನು ಪ್ರೊಬೆಶನರಿಯಾಗಿದ್ದಾಗ ಒಂದು ಘಟನೆ ನಡೆಯಿತು. "ಓರ್ವ ಆರೋಪಿಯನ್ನು ಹಿಡಿಯಲು ವಾಹನದಲ್ಲಿ ಬೆನ್ನಟ್ಟಿದೆವು, ಆಗ ನಮ್ಮ ವಾಹನಕ್ಕಿಂತ ಆತನ ವಾಹನ ತುಂಬಾ ವೇಗವಾಗಿ ಮುಂದಕ್ಕೆ ಓಡುತ್ತಿತ್ತು. ಬಳಿಕ ನಾಕಾಬಂದಿ ಹಾಕಿ ಹೇಗೋ ಆತನನ್ನು ಹಿಡಿದೆವು. ಈ ಘಟನೆ ಪೊಲೀಸ್ ಇಲಾಖೆಗೆ ವಾಹನಗಳ ಅವಶ್ಯಕತೆಯ ಬಗ್ಗೆ ನಮಗೆ ಮನವರಿಕೆ ಮಾಡುವಂತಾಯಿತು" ಎಂದು  ಸುಧೀರ್ ರೆಡ್ಡಿ ವಿವರಿಸಿದರು.

ಮಂಗಳೂರಿನಲ್ಲಿ ಈಗಾಗಲೇ 21 ಹೊಯ್ಸಳ ವಾಹನಗಳಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಪಂದಿಸಲು ಇನ್ನಷ್ಟು ವಾಹನಗಳ ಅವಶ್ಯಕತೆಯಿದ, ಕೇವಲ 15 ದಿನಗಳ ಹಿಂದೆ ಸಲ್ಲಿಸಿದ ಬೇಡಿಕೆಯನ್ನು ಸ್ಪಂದಿಸಿ ಅತೀ‌ ಕಡಿಮೆ ಅವಧಿಯಲ್ಲಿ ಬ್ಯಾಂಕ್ ಎರಡು ವಾಹನಗಳನ್ನು ಕೊಡುಗೆಯಾಗಿ ನೀಡಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಶ್ಲಾಘಿಸಿದರು. 

ಮಹಿಳೆಯರು ಸಹಾಯಕ್ಕಾಗಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದರೆ ಸ್ಥಳಕ್ಕೆ ತಲುಪಲು  ನಗರ ಭಾಗದಲ್ಲಿ ಆರರಿಂದ ಏಳು ನಿಮಿಷ ಹಿಡಿದರೆ, ಗ್ರಾಮೀಣ ಭಾಗದಲ್ಲಿ 15ರಿಂದ 20 ನಿಮಿಷ ಹಿಡಿಯುತ್ತಿದೆ. ಸಮಯವನ್ನು ಇನ್ನಷ್ಟು ಕಡಿಮೆ ಮಾಡಬೇಕಾದರೆ ಹೆಚ್ಚಿನ ವಾಹನಗಳ ಅವಶ್ಯಕತೆಯಿದೆ ಎಂದರು. 

ನಬಾರ್ಡ್ ನ ಮುಖ್ಯ  ಕಾರ್ಯನಿರ್ವಹ ಣಾಧಿಕಾರಿ ಡಾ.ಸುರೇಂದ್ರ ಬಾಬು ಮಾತನಾಡಿ, ನವಾರ್ಡ್ ನಿಂದ ಸಾಕಷ್ಟು ಕಾರ್ಯಕ್ರಮಗಳು ನಡೆದರೂ ಇದೊಂದು ವಿಶೇಷ ಕಾರ್ಯಕ್ರಮ. ಇಲಾಖೆಗೆ ವಾಹನ ನೀಡಬೇಕಾದರೆ ಆ ಬ್ಯಾಂಕಿನ ಯೋಚನೆ ಉನ್ನತ ಮಟ್ಟದ್ದಾಗಿರಬೇಕು. ಅಂಥ ಯೋಚನೆ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹೊಂದಿದ್ದಾರೆ.  ದೇಶದಲ್ಲಿ ಇಷ್ಟೊಂದು ದೊಡ್ಡ ಸಹಕಾರಿ ಬ್ಯಾಂಕ್ ಇನ್ನೊಂದಿಲ್ಲ ಎಂದು ಶ್ಲಾಘಿಸಿದರು.  

ಡಿಸಿಪಿಗಳಾದ ಮಿಥುನ್ ಎಚ್.ಎನ್., ರವಿಶಂಕರ್, ಉಮೇಶ್ ,ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನವೋದಯ ಗ್ರಾಮವಿಕಾಸ ಚ್ಯಾರಿಟೇಬಲ್ ಟ್ರಸ್ಟ್‌ ನ ಟ್ರಸ್ಟಿ ಮೇಘರಾಜ್, ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು, ಎಸ್.ಬಿ. ಜಯರಾಮ ರೈ  ಮೊದಲಾದವರು ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು.

Category
ಕರಾವಳಿ ತರಂಗಿಣಿ