ಮಂಗಳೂರು : ಉಮ್ಮಕ್ಕೆ ನೆಂಪು ಕೂಟ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೋಳಾರದ ದಿ.ಉಮಾವತಿ ಅವರ ಕಾರ್ಯಚಟುವಟಿಕೆ ನೆನಪಿಸಿಕೊಳ್ಳುವ ಮೂರನೇ ವರ್ಷದ 'ಉಮ್ಮಕ್ಕೆ ನೆಂಪು' ಕಾರ್ಯಕ್ರಮ ಆಗಸ್ಟ್ 17 ರಂದು ಬೆಳಗ್ಗೆ 10 ಗಂಟೆಗೆ ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಪ್ರೊ.ಬಿ.ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಸಹಭಾಗಿತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೂಡ್ಕಟ್ಟಿದ ಪಾತೆರಕತೆ, ದತ್ತಿನಿಧಿ ಉಪನ್ಯಾಸ, ವಿದ್ಯಾರ್ಥಿನಿಯರಿಗೆ ಉಮ್ಮಕ್ಕೆ ನೆಂಪು ಪಣವುದ ಬೆರಿಸಾಯ, ಸಂತಕವಿ ಕನಕದಾಸ ಪ್ರಶಸ್ತಿ ಪ್ರದಾನ ಹಾಗೂ ಪದರಂಗಿತ ಕಾರ್ಯಕ್ರಮಗಳು ನಡೆಯಲಿವೆ.ಉಮೆಕ್ಕೆನ ನೆಂಪು ಕುರಿತ ಕೂಡುಕಟ್ಟಿದ ಪಾತೆರಕತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಾರಾಮ ತೋಳ್ಳಾಡಿ ನಡೆಸಿಕೊಡುವರು. ಲೇಖಕಿ ಡಾ.ಜ್ಯೋತಿ ಚೇಳ್ಯಾರು ವಿಶೇಷ ದತ್ತಿ ಉಪನ್ಯಾಸ ನೀಡಲಿದ್ದಾರೆ. ಉಮ್ಮಕ್ಕೆ ನೆಂಪು ಪಣವುದ ಬೆರಿಸಾಯ ತಲಾ 10 ಸಾವಿರ ರೂ.ವನ್ನು ಕನ್ನಡ ಮಾಧ್ಯಮದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪ್ರೌಢ ಶಾಲಾ ಮಟ್ಟದಲ್ಲಿ ಅಧಿಕ ಅಂಕಗಳಿಸಿದ ಸಾಮಾಜಿಕ, ಆರ್ಥಿಕ ಬಡ ವಿದ್ಯಾರ್ಥಿನಿಯರಾದ ಗುರವಾಯನಕೆರೆ ಸರ್ಕಾರಿ ಪ್ರೌಢ ಶಾಲೆಯ ಫಾತಿಮಾತ್ ನಿಫಾನ, ಮಾಣಿಲ ಸರ್ಕಾರಿ. ಪ್ರೌಢಶಾಲೆಯ ಶೈನಾ ಲೀಸಾ ಮೊಂತೇರೋ ಮತ್ತು ಜಪ್ಪು ಮಂಗಳೂರಿನ ಕಾಸ್ಸಿಯ ಪ್ರೌಢಶಾಲೆಯ ಪ್ರಜ್ಞಾ ಅವರಿಗೆ ನೀಡಲಾಗುವುದು ಎಂದು ಅವರು ವಿವರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆಗೈದ ಮಹನೀಯರಿಗೆ ಸಂತಕವಿ ಕನಕದಾಸ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಈ ವರ್ಷ ಪ್ರಾರಂಭಿಸಿದ್ದು ಈ ಬಾರಿ ಜನಪರ ಹೋರಾಟಗಾರ ವಾಸುದೇವ ಉಚ್ಚಿಲ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಕೆ. ರಾಜು ಮೊಗವೀರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 30 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಫಲಕಗಳನ್ನು ಒಳಗೊಂಡಿದೆ. ಅಧ್ಯಕ್ಷತೆಯನ್ನು ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ ವಹಿಸಲಿದ್ದಾರೆ. ಪದರಂಗಿತ ಬಾವಗೀತಾ ಕಾರ್ಯಕ್ರಮವನ್ನು ಕಿನ್ನಿಗೋಳಿ ಸ್ವರಾಂಜಲಿಯ ಉಡುಪ ಕೊಡಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಮ್ಮಕ್ಕೆ ನೆಂಪು ಕೂಟ ಚಾರಿಟೇಬಲ್ ಟ್ರಸ್ಟ್ನ ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಕಾರ್ಯದರ್ಶಿ ಕೃಷ್ಣಮೂರ್ತಿ, ಜತೆ ಕಾರ್ಯದರ್ಶಿ ಸುಚಿತ್ರಾ, ಸದಸ್ಯರಾಗಿರುವ ಪ್ರಹ್ಲಾದ್, ನಿಶಾನ್ ಶೆಟ್ಟಿ, ಕರಾವಳಿ ಲೇಖಕಿ ವಾಚಕಿಯರ ಸಂಘದ ಕಾರ್ಯದರ್ಶಿ ಯಶೋಧ ಮೋಹನ್ ಉಪಸ್ಥಿತರಿದ್ದರು.