ಮಂಗಳೂರು: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 4 ನೇ ಸುತ್ತಿನ ಮೊದಲನೇ ಹಂತದ ಕಂದು ರೋಗ ಲಸಿಕಾ ಕಾರ್ಯಕ್ರಮವು ಮೂಲಕ ಜುಲೈ 10 ರಿಂದ ಪ್ರಾರಂಭವಾಗಲಿದ್ದು, ಜುಲೈ 31 ರವರೆಗೆ ಜಿಲ್ಲೆಯಾದ್ಯಂತ ದನ ಮತ್ತು ಎಮ್ಮೆಗಳ ಹೆಣ್ಣುಕರುಗಳಿಗೆ ಮಾತ್ರ ಉಚಿತವಾಗಿ ಕಂದು ರೋಗ (ಬ್ರುಸೆಲ್ಲೋಸಿಸ್) ವಿರುದ್ಧ ಲಸಿಕೆಯನ್ನು ನೀಡಲಾಗುತ್ತದೆ. ಲಸಿಕೆಯನ್ನು ಕರುಗಳಿಗೆ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ನೀಡಬೇಕು.
ಕಂದು ರೋಗವು ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದ್ದು ಜಾನುವಾರುಗಳಲ್ಲಿ ಜ್ವರ, ಗರ್ಭಪಾತ, ಗರ್ಭಧಾರಣೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಪ್ರಾಣಿಜನ್ಯ ರೋಗವಾಗಿದ್ದು, ಮನುಷ್ಯರಿಗೂ ಹರಡಬಹುದು. ಇದರ ಚಿಕಿತ್ಸೆ ದುಬಾರಿ ಮತ್ತು ತ್ರಾಸದಾಯಕವಾಗಿದ್ದು, ಒಟ್ಟಾರೆ ರೈತರಿಗೆ ತುಂಬಾ ಆರ್ಥಿಕ ನಷ್ಟ ಉಂಟುಮಾಡುತ್ತದೆ. ಆದ್ದರಿಂದ ರೈತ ಬಾಂಧವರು ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ, ತಮ್ಮ 4 ರಿಂದ 8 ತಿಂಗಳ ವಯಸ್ಸಿನ ಹೆಣ್ಣುಕರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.