ಮಂಗಳೂರು : ರಾಜಕೀಯ ಅಧಿಕಾರಕ್ಕಾಗಿ ಬಿಜೆಪಿ ಸಂಘಪರಿವಾರ ಹಿಂದೂ ಸಮುದಾಯವನ್ನು ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವುದು ಇವರ ವಿಭಜನೆಯ ರಾಜಕಾರಣದ ಹಿಡೆನ್ ಅಜೆಂಡಾವನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ನಡುವೆ ಇರುವ ಕೋಮುವಾದಿಗಳ ತಂತ್ರಗಳನ್ನು ಅವರ ಉದ್ದೇಶಗಳನ್ನು ಅರಿಯದೆ ಹೋದರೆ ಅದನ್ನು ಎದುರಿಸಲು ಅಸಾಧ್ಯ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದ್ದಾರೆ. ಕೊಂಚಾಡಿಯಲ್ಲಿ ಡಿವೈಎಫ್ಐ ಆಯೋಜಿಸಿದ ಕೋಮುವಾದಿ ವಿರೋಧಿ ವಾರಾಚರಣೆ ಸೌಹಾರ್ದ ಸಂಗಮ ಎಂಬ ಕಾರ್ಯಕ್ರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೋಮುವಾದಿ ಸಂಘಟನೆಗಳು ಹಿಂದುತ್ವದ ಹೆಸರಿನಲ್ಲಿ ಒಂದು ಸಮುದಾಯವನ್ನು ಪರಸ್ಪರ ಎತ್ತಿಕಟ್ಟುವ, ದ್ವೇಷ ಸಾಧಿಸುವ ಮನಸ್ಥಿತಿಯನ್ನು ಬೆಳೆಸುತ್ತಾ ಬಂದ ಪರಿಣಾಮವಾಗಿ ಒಂದು ಕಾಲಕ್ಕೆ ಪ್ರೀತಿ ಸೌಹಾರ್ದತೆಯಿಂದ ಬದುಕುತ್ತಿದ್ದ ಮನಸ್ಸುಗಳು ಇಂದು ಪರಸ್ಪರ ಹೊಡೆದಾಡುವ ವಾತಾವರಣವನ್ನು ನಿರ್ಮಿಸಿದ್ದಾರೆ. ದ.ಕ ಜಿಲ್ಲೆಯಲ್ಲಿ ಈವರೆಗೂ ನಡೆದ ಮತೀಯ ಸಂಘರ್ಷಗಳನ್ನು ಒಮ್ಮೆ ತೆಗೆದು ನೋಡಿದರೆ ಈ ಎಲ್ಲಾ ಗಲಭೆಗಳನ್ನು ಪ್ರಾರಂಭಿಸಿರುವುದರ ಹಿಂದೆ ಬಿಜೆಪಿ, ಸಂಘಪರಿವಾರ ಕೈವಾಡ ಅಡಗಿದೆ. ಅವರು ಹುಟ್ಟು ಹಾಕಿದ ಮತೀಯ ಸಂಘರ್ಷಗಳಿಗೆ ಬಡವರ ಮನೆಯ ಮಕ್ಕಳು ಬೀದಿ ಹೆಣವಾಗುವ ಅಥವಾ ಜೈಲು ಸೇರುವಂತಾಗಿದೆ ಎಂದರು.
ಇತ್ತೀಚೆಗೆ ನಡೆದ ಸರಣಿ ಹತ್ಯೆಗಳು ಒಂದು ಕಡೆ ಜಿಲ್ಲೆಯ ಜನರ ನಡುವೆ ಭಯದ ವಾತಾವರಣ ನಿರ್ಮಾಣಗೊಂಡರೆ ಮತ್ತೊಂದೆಡೆ ಹಿಂದುಳಿದ ವರ್ಗದ ಯುವಕರನ್ನು ಕ್ರಿಮಿನಲ್ ಗಳನ್ನಾಗಿಸುತ್ತಿರುವುದು ಬಹಳ ಅಪಾಯಕಾರಿ ಬೆಳವಣೆಗೆ. ಮೊದಲು ಸಂಘಪರಿವಾರ ಸೃಷ್ಟಿಸಲು ಹೊರಟ ಮತೀಯ ರಾಜಕಾರಣವನ್ನು ಅರ್ಥಮಾಡಿಕೊಂಡು ಅದರ ಹಿಂದೆ ಅಡಗಿರುವ ರಾಜಕಾರಣವನ್ನು ಬಯಲುಗೊಳಿಸಬೇಕು. ಹೆಚ್ಚು ಹೆಚ್ಚು ಸೌಹಾರ್ದ ಬೆಸೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಾಂತಿ ಸಾಮರಸ್ಯವನ್ನು ಮರುಸ್ಥಾಪಿಸುವಂತಾಗಬೇಕು ಎಂದು ಹೇಳಿದರು.