ಮಂಗಳೂರು : ಮೈರುಗ ಪ್ರಕಾಶನದ ಮೊದಲ ಕೃತಿ, ಮಲಯಾಳಂ 'ವಾಕ್' ಕೃತಿಯ ಅನುವಾದಿತ ಪುಸ್ತಕ 'ಮಾತು ಎಂಬ ವಿಸ್ಮಯ'ವನ್ನು ನಗರದ ಪತ್ರಿಕಾ ಭವನದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕನ್ನಡ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಬೇಕು. ಈ ಮೂಲಕ ಕನ್ನಡ ಇನ್ನಷ್ಟು ಬೆಳೆಯಬೇಕು. ಒಂದೆಡೆ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇನ್ನೊಂದೆಡೆ ಕನ್ನಡ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಪುಸ್ತಕಗಳನ್ನು ಹಣ ಕೊಟ್ಟು ಖರೀದಿಸಿ ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅನುವಾದಕಿ, ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಮಾತನಾಡಿ, 'ಮಾತು ಎಂಬ ವಿಸ್ಮಯ' ಕೃತಿ ಮಾತು ಹೇಗೆ ಆಡಬೇಕು ಎನ್ನುವುದನ್ನು ಅರ್ಥಪೂರ್ಣವಾಗಿ ಹೇಳುತ್ತದೆ. ಮಾತಿನ ಮೇಲೆ ನಮ್ಮ ಭವಿಷ್ಯನಿಂತಿದೆ. ನಾವಾಡುವ ಮಾತು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಉತ್ತಮ ಬದುಕು ರೂಪಿಸಿಕೊಳ್ಳಲು ಮಾತು ಹೇಗಿರಬೇಕು ಎಂಬುದನ್ನು ಈ ಪುಸ್ತಕ ತಿಳಿಸಿಕೊಡುತ್ತದೆ ಎಂದು ಹೇಳಿದರು.
ಕೃತಿಯ ಮೂಲ ಮಲಯಾಲಂ ಲೇಖಕ ಸಜಿ ಎಂ.ನರಿಕುಯಿ, ತುಳು ವರ್ಲ್ಡ್ ಫೌಂಡೇಷನ್ ಕಟೀಲು ಇದರ ನಿರ್ದೇಶಕ ಡಾ. ರಾಜೇಶ್ ಆಳ್ವ ಬದಿಯಡ್ಕ ಪ್ರಕಾಶಕ ಜಿ.ಕೆ.ಮೈರುಗ ರಾಮಚಂದ್ರ ಭಟ್ ಲೈಂಕಜೆ ಉಪಸ್ಥಿತರಿದ್ದರು.