ಮಂಗಳೂರು: ಎಪ್ರಿಲ್ 12ರಂದು ಬೆಳಗ್ಗೆ ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಅದ್ದೂರಿಯಾಗಿ ಜರಗಲಿದ್ದು, ಇಲ್ಲಿ ಕಂಬಳದ ಜೊತೆಗೆ ತುಳುನಾಡಿನ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಅಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತರಿರುವರು ಎಂದು ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಂಬಳದಲ್ಲಿ ಅನೇಕ ಪದಕಗಳನ್ನು ಗೆದ್ದಿರುವ "ದೂಜ" ನ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಲಾಗುವುದು. ಈ ಸಲ ಸುಮಾರು 200ರಷ್ಟು ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾಗವಹಿಸುವ ಪ್ರತಿ ಕೋಣಗಳಿಗೆ ಬೆಳ್ಳಿಯ ನಾಣ್ಯ ನೀಡಿ ಗೌರವಿಸಲಾಗುವುದು ಎಂದರು. ಮಳೆ ಪ್ರಾರಂಭ ಆಗುತ್ತಿರುವುದರಿಂದ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಕಂಬಳ ನೋಡಲು ಬರುವವರಿಗೆ ಅನ್ನದಾನದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಜಕುಮಾರ್ ಶೆಟ್ಟಿ, ಪುರುಷೋತ್ತಮ್ ಚಿತ್ರಾಪುರ, ಸುರೇಂದ್ರ ಕಂಬಳಿ, ಮೆಲ್ವಿನ್, ಯಶವಂತ ಶೆಟ್ಟಿ, ಬಿ.ಎಲ್.ಪದ್ಮನಾಭ ಕೋಟ್ಯಾನ್, ವಿನಯ್ ಶೆಟ್ಟಿ, ಸತೀಶ್ ಶೆಟ್ಟಿ, ಜಯಶೀಲ ಅಡ್ಯಂತಾಯ ಉಪಸ್ಥಿತರಿದ್ದರು