ಉಡುಪಿ: ಮೀನುಗಾರರು ಕೂಡ ದೇಶ ಕಾಯುವ ಸೈನಿಕರಿದ್ದಂತೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದರು. ಅವರು ಬೀಜಾಡಿ ಮೀನುಗಾರರ ಸಹಕಾರಿ ಸಂಘ ನಿಯಮಿತ, ಇದರ ತೆಕ್ಕಟೆಯ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದೇಶದ ಗಡಿಭಾಗದಲ್ಲಿ ಸೈನಿಕರು ಹೇಗೆ ದೇಶವನ್ನು ಕಾಯುತ್ತಾರಾ ಅದೇ ರೀತಿಯಲ್ಲಿ ಮೀನುಗಾರರು ಕೂಡ ಸಮುದ್ರದಲ್ಲಿ ಮೀನುಗಾರಿಕೆಯನ್ನು ಮಾಡುತ್ತಾ ಇವರೂ ಕೂಡ ಸಮುದ್ರದ ಗಡಿಯನ್ನು ಕಾಯುತ್ತಾರೆ. ಯಾವುದೇ ರೀತಿಯ ದೇಶ ವಿರೋಧಿ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಸಂಬಂಧಿಸಿದ ಕಾವಲು ಪಡೆಯವರಿಗೆ ಮಾಹಿತಿ ನೀಡಿ ದೇಶ ರಕ್ಷಣೆಗೆ ಸೈನಿಕರಂತೆ ಕಾರ್ಯನಿರ್ವಹಿಸುತ್ತಾರೆ ಎಂದರು. ಬೀಜಾಡಿ ಮೀನುಗಾರರ ಸಹಕಾರ ಸಂಘ ಸಾವಿರಾರು ಕುಟುಂಬಗಳಿಗೆ ದಾರಿದೀಪವಾದ ಸಹಕಾರ ಸಂಘವಾಗಿದ್ದು ಇವತ್ತು ಇದರ 4ನೇ ಶಾಖೆಯ ಉದ್ಘಾಟನೆ ತುಂಬಾ ಖುಷಿ ನೀಡಿದೆ. ಈ ಸಹಕಾರ ಸಂಘದ ಸೇವೆಯು ನಿರಂತರವಾಗಿ ಹೀಗೆ ಮುಂದುವರಿಯಲಿ ಎಂದು ಶುಭ ಹಾರೈಸಿದರು. ಸಂಘದ ಆಡಳಿತ ಮಂಡಳಿಯು ರಾಜಕೀಯ ರಹಿತವಾಗಿ ಇದರ ಚಟುವಟಿಕೆಯನ್ನು ನಡೆಸಿರುವುದರಿಂದ ಸಂಘವು ಎತ್ತರಕ್ಕೆ ಬೆಳೆಯುತ್ತಿದೆ ಇದಕ್ಕಾಗಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರಿಗೆ ಅಭಿನಂದನೆಗಳನ್ನು ತಿಳಿಸಿದರು. ಸಂಘವು ಸುಮಾರು 650 ಮಹಿಳಾ ಸ್ವಹಾಯ ಸಂಘಗಳಿಗೆ ಸಾಲವನ್ನು ನೀಡಿರುವುದು ಮಹಿಳೆಯರನ್ನು ಸ್ವಾಭಿಮಾನದಿಂದ ಜೀವನ ನಡೆಸುವಂತೆ ಮಾಡಿದೆ. ಇದು ನಿಜಕ್ಕೂ ತಾಯಂದಿರಿಗೆ ನೀಡಿದ ಗೌರವವಾಗಿದೆ. ತಾಯಂದಿರು ಮನೆಯಲ್ಲಿ ದುರ್ಗೆ, ಲಕ್ಷ್ಮೀಯರಾಗುತ್ತಾರೆ ಆದ್ದರಿಂದಾಗಿ ಸಾಲದ ಮರುಪಾವತಿ ಕೂಡ ಉತ್ತಮವಾಗಿ ಆಗುತ್ತಿದೆ ಎಂದು ಅವರು ಹೇಳಿದರು. ಈ ಸಂಘದ ಈ ಎಲ್ಲಾ ಕಾರ್ಯಗಳನ್ನು ಮೆಚ್ಚಿ ಹಲವು ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.