ಪ್ರತೀ ವರ್ಷ ಆಯೋಜಿಸಿಕೊಂಡು ಬಂದಿರುವ ಅಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ "ನೆರವು" ಪ್ರದಾನ ಕಾರ್ಯಕ್ರಮ ಡಿಸೆಂಬರ್ ದಿನಾಂಕ 25ರಂದು ಮಧ್ಯಾಹ್ನ ಗಂಟೆ 3.30ಕ್ಕೆ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿದೆ.
ಈ ವರ್ಷದ "ನೆರವು" ಕಾರ್ಯಕ್ರಮದಲ್ಲಿ ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ ನ ಅಧ್ಯಕ್ಷರು ಹಾಗು ಸಹ-ಸಂಸ್ಥಾಪಕರೂ ಆಗಿರುವ ಡಾ. ತೇಜಸ್ವಿನಿ ಅನಂತಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ ಅಳ್ವ, ಕಾಪು ವಿಧನಾಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ.ಗ್ರೂಪ್ ನ ಆಡಳಿತ ನಿರ್ದೇಶಕರಾದ ಗೌರವ್ ಪಿ. ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಎಂ.ಆರ್.ಜಿ.ಗ್ರೂಪ್ ಚೇರ್ಮನ್ ಡಾ. ಕೆ.ಪ್ರಕಾಶ್ ಶೆಟ್ಟಿ ಹೇಳಿದರು. ಅವರು ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ವರ್ಷ ಒಟ್ಟು 2750 ಕುಟುಂಬಗಳಿಗೆ ಸುಮಾರು 6 ಕೋಟಿ ರೂಪಾಯಿಗೂ ಮಿಕ್ಕಿ ನೆರವನ್ನು ವಿತರಿಸಲಾಗುತ್ತಿದೆ. ಇದರಿಂದ ಸುಮಾರು ಹದಿನೈದು ಸಾವಿರ ಮಂದಿಗೆ ಪ್ರಯೋಜನವಾಗಲಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಒಂದು ನಿಗದಿತ ಮಾನದಂಡವನ್ನು ಅನುಸರಿಸಲಾಗಿದೆ. ಅರ್ಜಿಗಳನ್ನು ಪರಿಶೀಲಿಸಿ, ಅವಶ್ಯ ಮಾಹಿತಿಗಳನ್ನು ಪಡೆದು ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಸಮಾಜದಲ್ಲಿ ಪರಿವರ್ತನೆ ತರಬಲ್ಲಂತಹ, ಸಾಮೂಹಿಕ ಹಿತದ ಕಾರ್ಯಕ್ರಮಗಳನ್ನು ಕೈಗೊಂಡ ಸಂಘ ಸಂಸ್ಥೆಗಳನ್ನು ಗುರುತಿಸಿ ಆಯ್ಕೆಮಾಡಲಾಗಿದೆ.
ಪ್ರತೀ ವರ್ಷದ ಶಿಷ್ಟಾಚಾರದಂತೆ ಫಲಾನುಭವಿಗಳನ್ನು ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಸ್ವಯಂಸೇವಕರ ತಂಡಗಳಿವೆ. ನೆರವು ವಿತರಣೆ ನಡೆಯುವ ಸ್ಥಳದಲ್ಲಿ 10 ಕೌಂಟರ್ ಗಳನ್ನು ತೆರೆಯಲಾಗುತ್ತದೆ. ಈಗಾಗಲೇ ವಿತರಣೆ ಮಾಡಿರುವ ಟೋಕನ್ ಗಳನ್ನು ತೋರಿಸಿ ಕೌಂಟರ್ ಗಳಲ್ಲಿ ನೆರವಿನ ಚೆಕ್ ಪಡೆಯಬಹುದು ಎಲ್ಲಿಯೂ ಅವ್ಯವಸ್ಥೆಗಳಿಗೆ ಅಸ್ಪದ ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ ಎಂದರು.
ಮಾನಸಿಕ ವಿಕಲತೆ ಹುಟ್ಟಿನಿಂದ ಬರುವ ದೀರ್ಘಕಾಲೀನ ಚಿಕಿತ್ಸೆ ಅವಶ್ಯವಿರುವ ಖಾಯಿಲೆ ಪೀಡಿತರಿಗೆ, ಅಂಗವೈಕಲ್ಯ, ಕ್ಯಾನ್ಸರ್ ಮುಂತಾದ ಖಾಯಿಲೆಗಳಿಂದ ಬಾಧಿತರಾಗಿರುವವರಿಗೆ ಚಿಕಿತ್ಸೆಗಾಗಿ ಆದ್ಯತೆಯ ಮೇಲೆ ನೆರವು ನೀಡುವುದನ್ನು ಪರಿಗಣಿಸಲಾಗಿದೆ. ಶಿಕ್ಷಣ ಮುಂದುವರಿಸಲು ಕಷ್ಟ ಪಡುತ್ತಿರುವವರಿಗೆ, ಕ್ರೀಡಾ ಕ್ಷೇತ್ರದ ಸಾಧಕರಿಗೆ, ಉತ್ತಮ ಶೈಕ್ಷಣಿಕ ಸಾಧನೆ ಮಾಡಿದವರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಅವರನ್ನು "ನೆರವು" ನೀಡಲು ಆಯ್ಕೆ ಮಾಡಲಾಗಿದೆ.
ಹಿಂದಿನ ವರ್ಷಗಳಲ್ಲಿ ಸಮುದಾಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಸಂಘ ಸಂಸ್ಥೆಗಳಿಗೆ ನೀಡಲಾದ ನೆರವು ಆಯಾ ಪರಿಸರದಲ್ಲಿ ಧನಾತ್ಮಕ ಪರಿಣಾಮ ಬೀರಿದೆ. ಸಾರ್ವಜನಿಕ ಆಸ್ತಿಗಳ ನಿರ್ಮಾಣ ಆಗಿದೆ. ಅವಕಾಶವಂಚಿತರು 'ನೆರವು' ಪಡೆದುಕೊಂಡು ಸ್ವಾವಲಂಬಿಯಾದ ಉದಾಹರಣೆಗಳಿವೆ. ಸಾಮಾಜಿಕ ಜವಾಬ್ದಾರಿಯ ನೆಲೆಯಲ್ಲಿ ನಾವು ಕೈಗೊಂಡ ಈ ಸೇವಾ ರೂಪದ ಕಾರ್ಯಕ್ರಮ ಸಾರ್ವಜನಿಕ ಮನ್ನಣೆ ಪಡೆದಿರುವುದು ಆಯೋಜಕರಾದ ನಮಗೆ ಸಮಾಧಾನ ತಂದಿದೆ. ಸಾರ್ಥಕ ಭಾವನೆಯನ್ನು ಮೂಡಿಸಿದೆ. ಅನುಭೂತಿ ಮತ್ತು ಬದ್ಧತೆಯಿಂದ ಕೈಗೊಂಡ "ನೆರವು” ಕಾರ್ಯಕ್ರಮ ಅನುಷ್ಠಾನದಲ್ಲಿ ನಮ್ಮ ತಂಡ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಿದೆ. ಶಿಕ್ಷಣ ಉಪಕ್ರಮದಡಿ ನೆರವು ಪಡೆದವರಲ್ಲಿ ಕೆಲವರು ಈಗ ಉದ್ಯೋಗಸ್ಥರಾಗಿ, ತಾವು ಇತರರಿಗೆ ಸಹಾಯ ಮಾಡುವ ಸ್ಥಿತಿಗೆ ತಲುಪಿರುವುದು ಈ ಯೋಜನೆ ತಂದ ಮಾನವೀಯ ಬದಲಾವಣೆ ಎಂದು ನಾವು ವಿನಯದಿಂದ ಹೇಳಬಯಸುತ್ತೇವೆ ಎಂದರು.