ಮಂಗಳೂರು : ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ಸಂಸ್ಥೆಯ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಮತ್ತೊಮ್ಮೆ ಗಮನಾರ್ಹ ಸಾಧನೆ ಮಾಡಿದ್ದಾರೆ. 2026ರ ಸೆಪ್ಟೆಂಬರ್ 7 ಮತ್ತು 8ರಂದು ಮೈಸೂರಿನ VTU ಪ್ರಾದೇಶಿಕ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 28ನೇ VTU ರಾಜ್ಯಮಟ್ಟದ ಅಂತರ ಕಾಲೇಜು ಕ್ರಾಸ್ ಕಂಟ್ರಿ (ಪುರುಷ ಮತ್ತು ಮಹಿಳಾ) ಚಾಂಪಿಯನ್ಶಿಪ್ನಲ್ಲಿ ಸಹ್ಯಾದ್ರಿ ಕಾಲೇಜಿನ ಮಹಿಳಾ ತಂಡವು ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಪುರುಷರ ತಂಡವು ರನ್ನರ್ಅಪ್ ಸ್ಥಾನವನ್ನು ಪಡೆದುಕೊಂಡಿದೆ. ಈ ಪ್ರತಿಷ್ಠಿತ ಚಾಂಪಿಯನ್ಶಿಪ್ನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ವಿವಿಧ ಅಂಗಸಂಸ್ಥೆಗಳ 228ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು.
ಮಹಿಳಾ ವಿಭಾಗದಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಯರು ವೈಯಕ್ತಿಕ ವಿಭಾಗದಲ್ಲೂ ಪದಕಗಳ ಬೇಟೆಯಾಡಿದ್ದು, ಕು. ವೀಕ್ಷಾ ವಿ. ಚಿನ್ನದ ಪದಕ, ಕು. ಸಾನಿಯಾ ಶೆಟ್ಟಿ ಬೆಳ್ಳಿಯ ಪದಕ ಹಾಗೂ ಕು. ವೈಷ್ಣವಿ ಪಡಸಲಗಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಚಾಂಪಿಯನ್ ಪ್ರಶಸ್ತಿ ಗೆದ್ದ ಸಹ್ಯಾದ್ರಿ ಮಹಿಳಾ ಕ್ರಾಸ್ ಕಂಟ್ರಿ ತಂಡದಲ್ಲಿ ಸಹಿತ್ಯ ಕೆ. ಪಿ., ಸಾನಿಯಾ ಶೆಟ್ಟಿ, ವೀಕ್ಷಾ ವಿ., ತ್ರಿಶಾ ಶೆಟ್ಟಿ, ವೈಷ್ಣವಿ ಪಡಸಲಗಿ ಮತ್ತು ಶ್ರೇಯಾ ಮೋಹನ್ ನಾಯಕ್ ಭಾಗವಹಿಸಿದ್ದರು. ರನ್ನರ್ಅಪ್ ಸ್ಥಾನ ಪಡೆದ ಸಹ್ಯಾದ್ರಿ ಪುರುಷರ ಕ್ರಾಸ್ ಕಂಟ್ರಿ ತಂಡದಲ್ಲಿ ಮನ್ವಿತ್ ಯು., ಆದಿತ್ಯ ಕೆ. ಎಸ್., ಪ್ರವಿತ್, ಗುರುಪ್ರಸಾದ್, ಪ್ರದ್ಯುನ್ ಹಾಗೂ ಪ್ರಜ್ವಲ್ ಪ್ರತಿನಿಧಿಸಿದ್ದರು.
ಈ ಗಮನಾರ್ಹ ಸಾಧನೆಗಾಗಿ ಕ್ರೀಡಾಪಟುಗಳನ್ನು ಸಹ್ಯಾದ್ರಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಸಿಬ್ಬಂದಿ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದು, ಅವರ ಮುಂದಿನ ಕ್ರೀಡಾ ಪಯಣಕ್ಕೆ ಶುಭ ಹಾರೈಸಿದ್ದಾರೆ.