image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ಮೊಂತಿ ಹಬ್ಬ ಸಂಭ್ರಮ

ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ಮೊಂತಿ ಹಬ್ಬ ಸಂಭ್ರಮ

ಮಂಗಳೂರು : ಕನ್ಯಾಮರಿಯಮ್ಮನವರ ಜನನ ಹಬ್ಬವನ್ನು ( 'ಮೊಂತಿ ಫೆಸ್ಟ್') ಸೆಪ್ಟೆಂಬರ್ 8 ರಂದು ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಸಾಂಪ್ರದಾಯಿಕ ಸಡಗರ ಹಾಗೂ ಭಕ್ತಿಯಿಂದ ಆಚರಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಹಬ್ಬದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿದ್ದರು. ಬಲಿಪೂಜೆಯ ಸಂದರ್ಭದಲ್ಲಿ ನೆರೆದಿದ್ದ ಭಕ್ತಾದಿಗಳು ಹಾಗೂ ಆಶ್ರಮದ ನಿವಾಸಿಗಳನ್ನು ಉದ್ದೇಶಿಸಿ ಪ್ರವಚನ ನೀಡಿದ ಬಿಷಪ್ ಸಲ್ಡಾನ್ಹಾ ಅವರು, ಕನ್ಯಾಮರಿಯಮ್ಮನವರ ಸದ್ಗುಣಗಳನ್ನು ಸ್ಮರಿಸಿದರು. ಧರ್ಮಸಭೆಯ ಮಾತೆಯಾಗಿ ಮತ್ತು ಅಚಲ ನಂಬಿಕೆಯ ಮಾದರಿಯಾಗಿ ಅವರ ಪಾತ್ರವನ್ನು ಬಣ್ಣಿಸಿದರು. ಈ ಹಬ್ಬದ ಸಾಂಸ್ಕೃತಿಕ ಮತ್ತು ಕೌಟುಂಬಿಕ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, "ಮೊಂತಿ ಫೆಸ್ಟ್ ಹೆಣ್ಣು ಮಗುವನ್ನು ಗೌರವಿಸುವ ಮತ್ತು ಭೂಮಿಯ ಸಮೃದ್ಧ ಫಸಲನ್ನು ಆಚರಿಸುವ ವಿಶಿಷ್ಟ ಹಬ್ಬವಾಗಿದೆ. ಇದು ಮೂಲತಃ ಕೌಟುಂಬಿಕ ಹಬ್ಬವಾಗಿದ್ದು, ಕೃತಜ್ಞತೆಯಿಂದ ಒಗ್ಗೂಡಲು ಮತ್ತು ಮಾತೆ ಮರಿಯಮ್ಮನವರ ಪ್ರೀತಿ ಹಾಗೂ ವಿನಯದ ಬೆಳಕಿನಲ್ಲಿ ನಮ್ಮ ಕೌಟುಂಬಿಕ ಬಾಂಧವ್ಯಗಳನ್ನು ನವೀಕರಿಸಲು ನಮ್ಮನ್ನು ಕರೆಯುತ್ತದೆ," ಎಂದು ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮಗಳು ಹೊಸ ಭತ್ತದ ತೆನೆಗಳ (ನೊವೆಂ) ಸಾಂಪ್ರದಾಯಿಕ ಆಶೀರ್ವಾದ ಮತ್ತು ಮಾತೆ ಮರಿಯಮ್ಮನವರಿಗೆ ಮಕ್ಕಳಿಂದ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಗೊಂಡವು. 

ಬಲಿಪೂಜೆಯಲ್ಲಿ ಸಂತ ಅಂತೋನಿ ಆಶ್ರಮದ ನಿರ್ದೇಶಕರಾದ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ, ಆಡಳಿತಾಧಿಕಾರಿ ವಂದನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್ ಮತ್ತು ವಂದನೀಯ ಫಾದರ್ ಎಫ್.ಎಕ್ಸ್. ಗೋಮ್ಸ್ ಅವರು ಸಹ-ಯಾಜಕರಾಗಿ ಪಾಲ್ಗೊಂಡಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು, ಹಿತೈಷಿಗಳು ಹಾಗೂ ಆಶ್ರಮದ ನಿವಾಸಿಗಳು ಬಲಿಪೂಜೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಹಾಗೂ ಕೃತಜ್ಞತಾ ಸಮರ್ಪಣೆಯಲ್ಲಿ ಒಗ್ಗೂಡಿದರು. ಹಬ್ಬದ ಸಂಭ್ರಮಾಚರಣೆಯು ಕರಾವಳಿಯ ಕ್ಯಾಥೊಲಿಕ್ ಸಂಪ್ರದಾಯದಂತೆ ಆಶೀರ್ವದಿಸಿದ ಭತ್ತದ ತೆನೆಗಳು ಹಾಗೂ ಕಬ್ಬನ್ನು ನೆರೆದಿದ್ದ ಎಲ್ಲಾ ಭಕ್ತರಿಗೆ ವಿತರಿಸುವ ಮೂಲಕ ಮುಕ್ತಾಯಗೊಂಡಿತು.

Category
ಕರಾವಳಿ ತರಂಗಿಣಿ