ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಕಾಂಪೌಂಡ್ ಒಳಗೆ ಕಾಡಾನೆಯೊಂದು ಪ್ರವೇಶಿಸಿದ್ದು, ಸ್ಥಳೀಯರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಕಾಲೇಜಿನ ಕಾಂಪೌಂಡ್ ಒಳಗಿರುವ ಕಾಡು ಪ್ರದೇಶದಲ್ಲಿ ಬೀಡು ಬಿಟ್ಟಿರುವ ಈ ಆನೆಯನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆನೆಯು ಸಮೀಪದ ಉಜಿರೆ ಪೇಟೆಯತ್ತ ನುಗ್ಗಲು ಯತ್ನಿಸಿದಾಗ, ಅದನ್ನು ಹಿಮ್ಮೆಟ್ಟಿಸಲು ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಹಾಗೂ ಪಟಾಕಿಗಳನ್ನು ಸಿಡಿಸಿ ಬೆದರಿಸುವ ಪ್ರಯತ್ನ ನಡೆಸಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಕಾಲೇಜಿನ ಹಿಂಬದಿಯ ಕಾಂಪೌಂಡ್ ಒಳಗಿನ ಅರಣ್ಯ ಮಾದರಿಯ ಜಾಗದಲ್ಲಿಯೇ ಕಾಡಾನೆ ನೆಲೆಸಿದೆ. ಈ ಸ್ಥಳವು ಕಾಲೇಜಿನ ಹಾಸ್ಟೆಲ್ ಕಟ್ಟಡದಿಂದ ಕೇವಲ ನೂರು ಮೀಟರ್ ದೂರದಲ್ಲಿದ್ದು, ಸುತ್ತಮುತ್ತ ಸಾಲು ಸಾಲು ವಸತಿ ಮನೆಗಳಿವೆ. ಅಲ್ಲದೆ, ಇದರ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು, ಜನನಿಬಿಡ ಉಜಿರೆ ಪೇಟೆಯೂ ತೀರಾ ಸಮೀಪದಲ್ಲಿದೆ. ಇದರಿಂದಾಗಿ ಕಾಡಾನೆಯು ಪೇಟೆಯತ್ತ ನುಗ್ಗುವ ದೊಡ್ಡ ಅಪಾಯ ಎದುರಾಗಿದೆ. ಪ್ರಸ್ತುತ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಅರಣ್ಯ ಇಲಾಖೆಯ ಸಿಬ್ಬಂದಿ, ಪರಿಸ್ಥಿತಿಯನ್ನು ಹತ್ತಿರದಿಂದ ನಿಗಾವಹಿಸಿ ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟಲು ಕಾರ್ಯಾಚರಣೆ ಮುಂದುವರಿಸಿದ್ದಾರೆ.