ಮಂಗಳೂರು : ಮಂಗಳೂರಿನ ಮಹಾತ್ಮಾ ಗಾಂಧಿ ವಿಕಾಸ ಯೋಜನೆ–2ರ ಅಡಿಯಲ್ಲಿ ಜೆರೊಸಾ ಸ್ಕೂಲ್ನಿಂದ ರೋಷನಿ ನಿಲಯದವರೆಗೆ ನಡೆಯುತ್ತಿರುವ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿʼಸೋಜಾ ಅವರು ಸ್ಥಳೀಯರು, ಇಂಜಿನಿಯರ್ಗಳು ಹಾಗೂ ಕಾರ್ಪೊರೇಟರ್ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಈ ರಸ್ತೆ ಕಾಮಗಾರಿಯ ಸುಮಾರು ಶೇ. 50ರಿಂದ 60ರಷ್ಟು ಕೆಲಸ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.
ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳು ಹಾಗೂ ಕೈಗೊಳ್ಳಬೇಕಾದ ಹೆಚ್ಚುವರಿ ಕೆಲಸಗಳ ಕುರಿತು ಸ್ಥಳೀಯರಿಂದ ಮಾಹಿತಿ ಪಡೆಯಲಾಗಿದೆ. ಅಲ್ಲದೆ ಕಾಮಗಾರಿಗೆ ಸಂಬಂಧಿಸಿದ ಕಾನೂನು ಹಾಗೂ ತಾಂತ್ರಿಕ ಅಂಶಗಳ ಬಗ್ಗೆ ಇಂಜಿನಿಯರ್ ಅಶೋಕ್ ಮೆಂಡೋನ್ಸಾ ಅವರೊಂದಿಗೆ ಚರ್ಚಿಸಿ, ಮುಂದಿನ ಹಂತದ ಕಾಮಗಾರಿಯನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.
ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ತುಂಬಿಸುವ ಬದಲು ಅಗತ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಕಾಂಕ್ರೀಟೀಕರಣ ಅಥವಾ ಇಂಟರ್ಲಾಕ್ ಅಳವಡಿಸುವಂತೆ ಸೂಚಿಸಿರುವ ಐವನ್ ಡಿʼಸೋಜಾ ಅವರು, ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷರಾದ ಅನಿಲ್ ಜೆರಾಲ್ಡ್ ಲೋಬೋ, ಇಂಜಿನಿಯರ್ ಅಶೋಕ್ ಮೆಂಡೋನ್ಸಾ, ಜೆರೋಸಾ ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಅರ್ಪಿತಾ, ಮಂಗಳೂರು ನಗರಪಾಲಿಕೆಯ ಇಂಜಿನಿಯರ್ಗಳಾದ ಶಿವಲಿಂಗಪ್ಪ, ಸಯೀದಾ, ಗುತ್ತಿಗೆದಾರರಾದ ಇಕ್ಬಾಲ್ ಹಾಗೂ ಸ್ಥಳೀಯರಾದ ಸಿಸಿಲಿಯಾ ಮೊಂತೆರೋ, ಶೆಲಟ್ ನೊರಹಾನ್ಹ ಮತ್ತು ಹಬೀಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.