ಬೆಂಗಳೂರು: ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು, ಕಲೆಗೆ ತಾವು ಪಡೆದಿದ್ದನ್ನು ಮರಳಿ ನೀಡುವ ಉದ್ದೇಶದಿಂದ 'ವಿಜಯ್ ಪ್ರಕಾಶ್ ಕಲ್ಚರಲ್ ಅಕಾಡೆಮಿ' (VPCC), 'ದ್ವಾರ್ ಸ್ಟುಡಿಯೋಸ್' ಮತ್ತು 'ದ್ವಾರ್ ಮ್ಯೂಸಿಕ್' ಎಂಬ ಮೂರು ಹೊಸ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿಯ ಸಪ್ತಗಿರಿ ಲೇಔಟ್ನಲ್ಲಿ ನಿರ್ಮಾಣವಾಗಿರುವ ಈ ಸಂಸ್ಥೆಗಳ ಮೂಲಕ, ಕಲಾಪ್ರೇಮಿಗಳಿಗೆ ಕಲಿಕೆ, ರೆಕಾರ್ಡಿಂಗ್ ಮತ್ತು ವೇದಿಕೆಯನ್ನು ಒದಗಿಸುವ ಮಹತ್ತರ ಕನಸನ್ನು ಅವರು ನನಸಾಗಿಸಿದ್ದಾರೆ.
ಸುಮಾರು ಮೂರು ವರ್ಷಗಳ ಶ್ರಮದ ಫಲವಾಗಿ ಈ ಯೋಜನೆ ಸಾಕಾರಗೊಂಡಿದ್ದು, ಕಲೆಗಾಗಿ ಒಂದೇ ಸೂರಿನಡಿ ಕಲಾವಿದರು, ಕಲಾಪೋಷಕರು ಮತ್ತು ಕಲಾರಸಿಕರು ಒಂದಾಗಬೇಕೆಂಬುದು ವಿಜಯ್ ಪ್ರಕಾಶ್ ಮತ್ತು ಅವರ ಪತ್ನಿ ಮಹತಿ ವಿಜಯ್ ಪ್ರಕಾಶ್ ಅವರ ಆಶಯವಾಗಿದೆ.
VPCCಯಲ್ಲಿ ನಾಲ್ಕು ವರ್ಷದ ಮಕ್ಕಳಿಂದ ಹಿಡಿದು 82 ವರ್ಷದ ಹಿರಿಯರವರೆಗೆ ಎಲ್ಲಾ ವಯೋಮಾನದವರಿಗೂ ರಂಗಗೀತೆ, ಜಾನಪದ, ಭಾವಗೀತೆ, ಭಕ್ತಿಗೀತೆ ಹಾಗೂ ಸಿನಿಮಾ ಗೀತೆಗಳ ತರಬೇತಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ, ಸಂಗೀತಾಸಕ್ತರು ತಮ್ಮ ಹಾಡುಗಳನ್ನು ವೃತ್ತಿಪರ ಮಟ್ಟದಲ್ಲಿ ರೆಕಾರ್ಡ್ ಮಾಡಲು 'ದ್ವಾರ್ ಸ್ಟುಡಿಯೋಸ್' ನೆರವಾಗಲಿದ್ದು, ಇಲ್ಲಿ ಸಂಗೀತ ನಿರ್ದೇಶಕರು ಹಾಗೂ ತಂತ್ರಜ್ಞರ ತಂಡ ಲಭ್ಯವಿದೆ. ಜತೆಗೆ, ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ 'ದ್ವಾರ್ ಮ್ಯೂಸಿಕ್' ಎಂಬ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಲಾಗಿದ್ದು, ಈಗಾಗಲೇ 'ಬೆರೆತು', 'ಬಾನ ಸರದಾರ', 'ಅಹಂ ಸತ್' ಸೇರಿದಂತೆ 'ನವರಾತ್ರಿ ಗೀತಮಾಲಾ'ದಂತಹ ಉತ್ತಮ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮದ ಭಾಗವಾಗಿ ಕೀರ್ತನ್ ಹೊಳ್ಳ ಸಂಗೀತ ಸಂಯೋಜನೆಯಲ್ಲಿ ತನುಷಾ ಕೆ.ಎಂ ಹಾಡಿರುವ 'ಮೋಹ' ಎಂಬ ಹೊಸ ಹಾಡನ್ನು ಸಹ ಬಿಡುಗಡೆ ಮಾಡಲಾಯಿತು