ಮುಂಬೈ : 'ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನಟ ಸೈಫ್ ಅಲಿ ಖಾನ್ ಬಾಲಿವುಡ್ನ ಇಂದಿನ ಸಿನಿಮಾ ಸಂಸ್ಕೃತಿಯ ಬಗ್ಗೆ ಮಹತ್ವದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಆದಿತ್ಯ ಧಾರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಾಲಿವುಡ್ನ ಕ್ರಿಯೇಟಿವ್ ದಾರಿಯನ್ನೇ ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರದ ಅಭೂತಪೂರ್ವ ಯಶಸ್ಸು ಚಿತ್ರರಂಗದಲ್ಲಿ ಹೊಸ ಗೆರೆ ಎಳೆದಿದ್ದು, ನಿರ್ಮಾಪಕರಿಗೆ ಹಳೆ ಫಾರ್ಮುಲಾಗಳನ್ನು ಬಿಟ್ಟು ಹೊಸ ರೀತಿಯ ಕಥೆಗಳನ್ನು ಪ್ರಯೋಗಿಸಲು ಧೈರ್ಯ ಕೊಟ್ಟಿದೆ ಎಂದು ಸೈಫ್ ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಸೈಫ್, "ನಾನು ಬಾಲಿವುಡ್ ಅನ್ನು ಈಗ 'ಧುರಂಧರ್ಗಿಂತ ಮುಂಚೆ ಮತ್ತು ಧುರಂಧರ್ ನಂತರ' ಎಂಬ ಎರಡು ಕಾಲಘಟ್ಟಗಳಾಗಿ ನೋಡುತ್ತಿದ್ದೇನೆ" ಎಂದಿದ್ದಾರೆ. ಹೊಸ ಆಲೋಚನೆಗಳು ಹಾಗೂ ಒರಿಜಿನಲ್ ಕಥೆಗಳನ್ನು ಸ್ವೀಕರಿಸಲು ಇಂದಿನ ಪ್ರೇಕ್ಷಕರು ಸಿದ್ಧರಾಗಿದ್ದಾರೆ ಎಂಬುದನ್ನು ಈ ಸಿನಿಮಾ ಸಾಬೀತುಪಡಿಸಿದೆ. ಕೇವಲ ಗ್ಲಾಮರ್ಗಾಗಿ ಐಟಂ ಸಾಂಗ್ಗಳನ್ನು ತುರುಕುವ ಬದಲು, ಸಿನಿಮಾದ ಹಾಡುಗಳು ಮತ್ತು ಮ್ಯೂಸಿಕ್ ಕಥೆಯ ಜೊತೆ ಸಹಜವಾಗಿ ಬೆರೆತುಹೋಗಿರುವುದು ಚಿತ್ರದ ಪ್ಲಸ್ ಪಾಯಿಂಟ್ ಎಂದು ಅವರು ನಿರ್ಮಾಪಕರನ್ನು ಶ್ಲಾಘಿಸಿದ್ದಾರೆ.
ಸದ್ಯಕ್ಕೆ ಸೈಫ್ ಅಲಿ ಖಾನ್ ಈ ಮಾದರಿಯ ಯಾವುದೇ ಹೊಸ ಸಿನಿಮಾಗೆ ಸಹಿ ಹಾಕದಿದ್ದರೂ, ಅರ್ಥಪೂರ್ಣ ಕಥೆ ಹಾಗೂ ರಿಸ್ಕ್ ಇರುವ ಪ್ರಾಜೆಕ್ಟ್ಗಳನ್ನು ಮಾಡಲು ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಅವರು ಪ್ರಿಯದರ್ಶನ್ ನಿರ್ದೇಶನದ 'ಹೈವಾನ್' ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸುತ್ತಿದ್ದು, ಈ ಚಿತ್ರವು 2026ರ ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ. ಇದರೊಂದಿಗೆ ನೆಟ್ಫ್ಲಿಕ್ಸ್ನ 'ಹಮ್ ಹಿಂದೂಸ್ತಾನಿ' ಎಂಬ ರಹಸ್ಯ ಕಥಾಹಂದರ ಹೊಂದಿರುವ ಸಿನಿಮಾದಲ್ಲೂ ಸೈಫ್ ಕಾಣಿಸಿಕೊಳ್ಳಲಿದ್ದಾರೆ.