ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಮರುಬರೆದ 'ಬಾಹುಬಲಿ' ಸಿನಿಮಾ ಕೇವಲ ತೆರೆಯ ಮೇಲೆ ಮಾತ್ರ ಅದ್ಭುತವಾಗಿರಲಿಲ್ಲ, ಅದರ ಹಿಂದಿನ ಜರ್ನಿ ಒಂದು ಭೀಕರ ಯುದ್ಧವೇ ಆಗಿತ್ತು ಎಂದು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸ್ಮರಿಸಿದ್ದಾರೆ.
'#BaahubaliTheTorchbearer' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಆ ದಿನಗಳ ಸಂಘರ್ಷವನ್ನು ನೆನೆದು ಭಾವುಕರಾಗಿ ಮಾತನಾಡಿದರು. ಸಿನಿಮಾ ಬಿಡುಗಡೆಯಾದ ಆರಂಭದ ದಿನಗಳಲ್ಲಿ ನಿರ್ಮಾಪಕರು ಎದುರಿಸಿದ ಒತ್ತಡದ ಬಗ್ಗೆ ಮಾತನಾಡುತ್ತಾ, ಅಂದು ಏನಾದರೂ ಹೆಚ್ಚುಕಮ್ಮಿ ಆಗಿ ಸಿನಿಮಾ ಸೋತಿದ್ದರೆ ಶೋಬು ಯರ್ಲಗಡ್ಡ, ಪ್ರಸಾದ್ ದೇವಿನೇನಿ ಮತ್ತು ರಾಜಮೌಳಿ ಅವರ ಇಡೀ ಜೀವನವೇ ತಲೆಕೆಳಗಾಗಿ ಅವರು ಬೀದಿಗೆ ಬರಬೇಕಾಗುತ್ತಿತ್ತು ಎಂದು ಆ ದಿನದ ಆತಂಕವನ್ನು ತೆರೆದಿಟ್ಟಿದ್ದಾರೆ.
ಇನ್ನು ಬಾಹುಬಲಿ ಚಿತ್ರಕ್ಕೆ ಜಪಾನ್ ದೇಶದ ಪ್ರೇಕ್ಷಕರು ನೀಡಿದ ಅಭೂತಪೂರ್ವ ಪ್ರೀತಿಯನ್ನು ಕೊಂಡಾಡಿದ ಪ್ರಭಾಸ್, ಆ ದೇಶ ಈಗ ತಮಗೆ ತಮ್ಮ ಎರಡನೇ ಮನೆಯಂತಾಗಿದೆ ಎಂದು ಹೇಳಿಕೊಂಡಿದ್ದಾರೆ. ಚಿತ್ರದ ಜಾಗತಿಕ ಮಟ್ಟದ ಬೃಹತ್ ಯಶಸ್ಸಿನ ನಂತರ, ಮುಂದೇನು ಮಾಡಬೇಕು ಎಂಬ ದಿಕ್ಕು ತೋಚದ ಗೊಂದಲ ಮತ್ತು ತೀವ್ರ ಮಾನಸಿಕ ಒತ್ತಡದ ದಿನಗಳನ್ನು ತಾವು ಅನುಭವಿಸಿದ್ದಾಗಿ ಅವರು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.