'ಪಡ್ಡೆಹುಲಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಯುವ ನಟ "ಶ್ರೇಯಸ್ ಮಂಜು" ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದ ಅಂಗವಾಗಿ ಅವರು ನಟಿಸುತ್ತಿರುವ 'ದಿಲ್ದಾರ್' ಚಿತ್ರತಂಡವು ವಿಶೇಷವಾದ ಬರ್ತ್ಡೇ ಟೀಸರ್ ಬಿಡುಗಡೆ ಮಾಡುವ ಮೂಲಕ ನಟನಿಗೆ ಶುಭ ಕೋರಿದೆ. ಆರಂಭದಿಂದಲೂ ಆಕ್ಷನ್ ಸಿನಿಮಾಗಳಲ್ಲಿ ಮಿಂಚುತ್ತಿರುವ ಶ್ರೇಯಸ್, ಈ ಟೀಸರ್ನಲ್ಲಿ ಮತ್ತಷ್ಟು ಖಡಕ್ ಮತ್ತು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಝಲಕ್ ಭಾರಿ ಮೆಚ್ಚುಗೆ ಪಡೆಯುತ್ತಿದೆ.
ಮಧು ಗೌಡ ಗಂಗೂರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಇಂದಿನ ಯುವ ಪೀಳಿಗೆಗೆ ಹತ್ತಿರವಾಗುವಂತಹ ವಿಶಿಷ್ಟ ಕಥಾಹಂದರವನ್ನು ಹೊಂದಿದೆ. ಬಿಡುಗಡೆಯಾಗಿರುವ ಟೀಸರ್ ಸಿನಿಮಾದ ಅದ್ಧೂರಿತನ ಹಾಗೂ ಶ್ರೇಯಸ್ ಮಂಜು ಅವರ ಮಾಸ್ ಲುಕ್ಗೆ ಸಾಕ್ಷಿಯಾಗಿದೆ. ಏನ್ಸಿಯೆಂಟ್ ಮೂವೀಸ್ ಬ್ಯಾನರ್ನಡಿಯಲ್ಲಿ ಡಾ. ಆರ್ ಸಂತೋಷ್ ಕುಮಾರ್ (ಎಸ್ವಿಟಿ) ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.
ವಿಶೇಷವೆಂದರೆ, ಖ್ಯಾತ ನಟ ಶರಣ್ ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್ ಸೇರಿದಂತೆ ದೊಡ್ಡ ಹಾಸ್ಯ ಕಲಾವಿದರ ಪಡೆಯೇ ಇದ್ದು, ಕೆಜಿಎಫ್ ಖ್ಯಾತಿಯ ಆಂಡ್ರೋ ಅವಿನಾಶ್ ಹಾಗೂ ಭಜರಂಗಿ ಲೋಕಿ ಖಳನಾಯಕರಾಗಿ ಅಬ್ಬರಿಸಿದ್ದಾರೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಶೀಘ್ರದಲ್ಲೇ ಬಿಡುಗಡೆಯ ದಿನಾಂಕವನ್ನು ಘೋಷಿಸಲಿದೆ.