ಬೆಂಗಳೂರು: ಬೇಡನಾಗಿದ್ದ ವಾಲ್ಮೀಕಿ ಮಹರ್ಷಿ ವಾಲ್ಮೀಕಿಯಾಗಿ ಬದಲಾದ ಪಾವನ ಕಥೆಯನ್ನು ಹೊಂದಿರುವ "ಮಹರ್ಷಿ ವಾಲ್ಮೀಕಿ" ಕಿರುಚಿತ್ರವು ರಾಮನವಮಿಯ ಶುಭ ಸಂದರ್ಭದಲ್ಲೇ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಅದ್ದೂರಿಯಾಗಿ ನೆರವೇರಿತು.
ನಿರ್ದೇಶಕ ಪ್ರವೀಣ್ ಶಿವಣ್ಣ ಅವರ ಸಾರಥ್ಯದಲ್ಲಿ 21 ನಿಮಿಷಗಳ ಕಾಲ ಅದ್ಭುತವಾಗಿ ಮೂಡಿಬಂದಿರುವ ಈ ಚಿತ್ರಕ್ಕೆ ರತ್ನ ದಾಸ್ ಅವರು ಬಂಡವಾಳ ಹೂಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ಸುರೇಶ್ ಅರಸ್, ನಟ ಗಣೇಶ್ ರಾವ್ ಕೇಸರ್ಕರ್ ಹಾಗೂ ಪದ್ಮಶ್ರೀ ವೆಂಕಟೇಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಿರುಚಿತ್ರವನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಪ್ರವೀಣ್ ಶಿವಣ್ಣ, "ಸಂಕಲನಕಾರನಾಗಿ ಕೆಲಸ ಮಾಡಿದ ಅನುಭವದ ಮೇಲೆ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದೇನೆ. ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಇಡೀ ತಂಡದ ಸಹಕಾರದಿಂದ ವಾಲ್ಮೀಕಿ ಮಹರ್ಷಿಗಳ ಜೀವನ ಚರಿತ್ರೆಯನ್ನು ಮನಮುಟ್ಟುವಂತೆ ತೋರಿಸಲು ಸಾಧ್ಯವಾಗಿದೆ" ಎಂದು ತಿಳಿಸಿದರು.
ಚಿತ್ರದಲ್ಲಿ ಮಹರ್ಷಿ ವಾಲ್ಮೀಕಿಯ ಪಾತ್ರ ನಿರ್ವಹಿಸಿದ ನಟ ಸುಜಿತ್ ಶೆಟ್ಟಿ ಮಾತನಾಡಿ, "ರಾಮ 14 ವರ್ಷ ವನವಾಸ ಮುಗಿಸಿ ಬಂದಂತೆ, ನಾನು ಕೂಡ ನಟನೆಗೆ ಮರಳಲು 14 ವರ್ಷ ಕಾಯಬೇಕಾಯಿತು. ಆ ಮರಳುವಿಕೆ ವಾಲ್ಮೀಕಿ ಮಹರ್ಷಿಗಳ ಪಾತ್ರದ ಮೂಲಕವೇ ಆಗಿರುವುದು ಕಾಕತಾಳೀಯ ಮತ್ತು ಸೌಭಾಗ್ಯ. ಹಿರಿಯ ಕಲಾವಿದ ಶಿವಮಣಿ ಅವರ ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ" ಎಂದರು.
ನಟಿ ರೂಪ ಮುತ್ತುರಾಯಪ್ಪ ಅಭಿನಯದ ಬಗ್ಗೆ ಸಂತಸ ಹಂಚಿಕೊಂಡರೆ, ನಿರ್ಮಾಪಕಿ ರತ್ನ ದಾಸ್ ಅವರು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಛಾಯಾಗ್ರಾಹಕ ತನ್ವಿಕ್ ಹಾಗೂ ಸಂಗೀತ ನಿರ್ದೇಶಕ ರಾಮಾನುಜನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು