ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳೆ ಹೆಚ್ಚಾಗಿ ಬರುತ್ತಿದೆ. ಹೊಸತಂಡದ ಹೊಸಪ್ರಯತ್ನವನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಅಂತಹುದೇ ಹೊಸತಂಡದ ಹೊಸ ಪ್ರಯತ್ನ "ಅನಂತ ಪಯಣ". ನೃತ್ಯ ಕಲಾವಿದನಾಗಿ, ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿ ಅನುಭವವಿರುವ ಶ್ರೀ ಕಾಕಾ," ಅನಂತ ಪಯಣ"ದ ಮೂಲಕ ನಾಯಕನಾಗಿ ಹಾಗೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಎಸ್ ಕೆ ಫಿಲಂಸ್ ಫ್ಯಾಕ್ಟರಿ ಲಾಂಛನದಲ್ಲಿ ಸಂತೋಷ್ ಅಶೋಕ್ ಹೆಗಡೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
"ಅನಂತ ಪಯಣ" ಇದು ಸಂಚಾರಿ ಕುರುಬರ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. "ಸಂಚಾರಿ ಕುರುಬರು" ಸ್ಥಿರವಾದ ಮನೆ ಹೊಂದಿರದೆ, ಋತುಮಾನಕ್ಕೆ ಅನುಗುಣವಾಗಿ ಕುರಿಗಳೊಂದಿಗೆ ನೂರಾರು ಕಿಲೋಮೀಟರ್ ಸಂಚರಿಸುತ್ತಾರೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಕಥೆ ಇದು. ಈ ಚಿತ್ರಕ್ಕೆ ನಾನೇ ಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಜೊತೆಗೆ ನಾಯಕನಾಗಿಯೂ ನಟಿಸಿದ್ದೇನೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರಕ್ಕೆ ರೀರೆಕಾರ್ಡಿಂಗ್ ನಡೆಯುತ್ತಿದೆ.
ಬೆಳಗಾವಿ, ಬೆಂಗಳೂರು ಹಾಗೂ ಮಹಾರಾಷ್ಟ್ರದಲ್ಲಿ ಚಿತ್ರೀಕರಣ ನಡೆದಿದೆ. ನಾನು ಕುರಿಗಾಹಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ಮೂರು ಸಾಹಸ ಸನ್ನಿವೇಶಗಳು ಹಾಗೂ ಐದು ಹಾಡುಗಳು ಸಹ ಇದೆ. ಆಕಾಶ ಪರ್ವ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ದೀಪು ಗೌಡ ಸಂಕಲನ, ರಘು ನೃತ್ಯ ನಿರ್ದೇಶನ ಹಾಗೂ ರಿಸ್ಕಿ ಶಿವು ಅವರ ಸಾಹಸ ನಿರ್ದೇಶನವಿರುವ "ಅನಂತ ಪಯಣ" ಚಿತ್ರದ ನಾಯಕಿಯಾಗಿ ನಿವಿಶ್ಕಾ ಪಾಟೀಲ್ ನಟಿಸಿದ್ದಾರೆ.
ಎಂ.ಕೆ ಮಠ, ಮಂಜುನಾಥ್ ಹೆಗಡೆ, ಅಪೂರ್ವ ಶ್ರೀ, ಲಕ್ಷ್ಮೀ ಸಿದ್ದಯ್ಯ, ಬಲ ರಾಜವಾಡಿ, ಸಂದೀಪ್ ನೀನಾಸಂ, ಪ್ರಶಾಂತ್ ಸಿದ್ದಿ, ಲಪಂಗ್ ರಾಜಾ, ಅನನ್ಯ ನಿಹಾರಿಕ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದು ತಿಳಿಸಿದ ಚಿತ್ರದ ನಿರ್ದೇಶಕ ಹಾಗೂ ನಾಯಕ ಶ್ರೀ ಕಾಕಾ, ಸದ್ಯದಲ್ಲೇ ಚಿತ್ರದ ಹಾಡುಗಳು ಹಾಗೂ ಟೀಸರ್ ಬಿಡುಗಡೆಯಾಗಲಿದೆ ಎನ್ನುತ್ತಾರೆ.