ಮಂಗಳೂರು: 'ಪಂಚರಂಗಿ' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ತಮ್ಮ ಚೊಚ್ಚಲ 'ಅಮರ್ಥ' ಚಿತ್ರದ ಮೂಲಕ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ನಿರ್ಮಾಪಕರಾಗಿ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಈ ಸಿನಿಮಾಕ್ಕೆ ಗುರು ಹೆಗ್ಡೆಯವರು ಕೂಡಾ ನಿರ್ಮಾಪಕರಾಗಿದ್ದಾರೆ.
ಗುರು ಹೆಗ್ಡೆ ಮತ್ತು ವಿನಯ್ ಪ್ರೀತಂ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಅಮರ್ಥ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಸರ್ಜಾ, ನಿರ್ದೇಶಕ ಗುರು ಹೆಗ್ಡೆ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಪ್ರೇಕ್ಷಕರಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.
'ಅಮರ್ಥ' ಸಿನಿಮಾವು ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಎಲ್ಲಾ ಪ್ರಮುಖ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ ಎಂದು ಸಿನಿಮಾದ ನಿರ್ದೇಶಕ ಗುರು ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಮರ್ಥ ಅಂದರೆ ಅಂತ್ಯ ಇಲ್ಲದ್ದು. ಇದು ಸಂಸ್ಕೃತ ಪದ. ಸಿನಿಮಾದಲ್ಲಿ ಒಳ್ಳೆಯ ಕತೆ ಇದೆ. ಕತೆಯೊಂದಿಗೆ ಹಾಸ್ಯ ಇದೆ. ಇದು ಪ್ರತಿಯೊಬ್ಬರ ಕತೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವಂತಹ ಕತೆಯನ್ನು ಅಮರ್ಥದಲ್ಲಿ ನೀಡಿದ್ದೇವೆ ಎಂದರು.
ಸಿನಿಮಾಕ್ಕೆ ಶಿರ್ವ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ ಎಂದರು. ಚಿತ್ರದ ನಾಯಕಿ ಮೇಘನಾರಾಜ್ ಮಾತನಾಡಿ ಶ್ರೀನಗರ ಕಿಟ್ಟಿಯೊಂದಿಗೆ ಅಭಿನಯಿಸಿದ ಮೂರನೇ ಸಿನಿಮಾ ಇದಾಗಿದೆ. ಇಲ್ಲಿ ನನ್ನದು ಮತ್ತು ಕಿಟ್ಟಿ ಅವರದ್ದು ವಿಭಿನ್ನ ಪಾತ್ರ ಎಂದರು.
ಶ್ರೀನಗರ ಕಿಟ್ಟಿ ಮಾತನಾಡಿ ಗುರು ಹೆಗ್ಡೆ ನಿರ್ಮಾಪಕರಾಗಿ, ನಿರ್ದೇಶಕರಾಗಿ ನಟರಾಗಿ ಇಲ್ಲಿ ಕೆಲಸ ಮಾಡಿದ್ದಾರೆ. ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸ ಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುಭಾಷಿಣಿ ಶೆಟ್ಟಿ, ಆರಾಧನಾ ಭಟ್, ವಿನಯ್ ಪ್ರೀತಮ್, ಪಿಎಲ್ ಅಶ್ರಿತ್ ಮೊದಲಾದವರು ಉಪಸ್ಥಿತರಿದ್ದರು. ಅಮರ್ಥ ಸಿನಿಮಾ ಸೆಪ್ಟಂಬರ್ 18 ರಂದು ರಾಜ್ಯಾದ್ಯಂತ ಪ್ರದರ್ಶನ ಕಾಣಲಿದೆ.