ಶ್ರಾವಸ್ತಿಯ ಶ್ರೀಮಂತನ ಮಗಳಾಗಿದ್ದ ಕಿಸಾ ಗೌತಮಿ ತನ್ನ ಕಂದನ ಸಾವಿನಿಂದ ಪರಿತಪಿಸುತ್ತಿದ್ದಳು. ಊರಿನ ಹೊರಗಿದ್ದ ಗೌತಮ ಬುದ್ಧನಾದರೂ ತನ್ನ ಮಗುವನ್ನು ಬದುಕಿಸಿಕೊಡಬಹುದೇನೋ ಎಂದು ಬುದ್ಧನ ಬಳಿ ಬಂದಾಗ ಗೌತಮಿಗೆ ಬುದ್ದನು “ಸಾವಿಲ್ಲದ ಮನೆಯ ಸಾಸಿವೆ” ತೆಗೆದುಕೊಂಡು ಬಂದರೆ ನಿನ್ನ ಮಗನನ್ನು ಬದುಕಿಸುತ್ತೇನೆ ಎಂದನಂತೆ. ಗೌತಮಿಯೋ ಮಗನನ್ನು ಬದುಕಿಸಿಕೊಳ್ಳುವ ತವಕದಲ್ಲಿ ತನ್ನೂರಿನ ಪ್ರತಿ ಮನೆಯನ್ನು ಬಿಡದೇ ಸಾಸಿವೆಗಾಗಿ ಅಂಗಲಾಚುತ್ತಾಳೆ. ಆದರೆ ಸಾವಿಲ್ಲದ ಮನೆಯೇ ಸಿಗುವುದಿಲ್ಲ. ಮತ್ತೆಲ್ಲಿ ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾದ್ಯ. ಆಗ ಕಿಸಾ ಗೌತಮಿಗೆ ವಾಸ್ತವ ದರ್ಶನವಾಗುತ್ತದೆ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿ ಜೀವಿಗೂ ಸಾವು ಇದೆ. ಮಾನವ ಜೀವನದ ಅರಂಭ ಹಾಗೂ ಅಂತ್ಯ ಭಗವಂತನೇ ಆಗಿದ್ದಾನೆ. ಮಾನವರೆಲ್ಲರೂ ಈ ಲೋಕದ ಋಣ ಕಳೆದ ಬಳಿಕ ಅವನಲ್ಲೇ ಒಂದಾಗುವವರು. ಕೆಲವರಿಗೆ ಬೇಗ ಇನ್ನು ಕೆಲವರಿಗೆ ಇನ್ನೊಂದಷ್ಟು ದಿನ ಮುಂದೆ ಅಷ್ಟೆ. ಮನುಷ್ಯ ನಾನು, ನನ್ನದೆಂದು ಎಷ್ಟೇ ಮೆರೆದರೂ ಕೊನೆಗೆ ಆ ದೇವರ ಮುಂದೆ ಶರಣಾಗಲೇಬೇಕು. ಜಗತ್ತಿನ ಪ್ರತಿಯೊಂದು ಜೀವಿಗೂ ಒಂದು ಆಯಸ್ಸಿದೆ. ಕೆಲವು ಅಲ್ಪಾಯುಷಿಗಳಾದರೆ ಕಡಲಾಮೆಯಂತಹವು ಶತವರ್ಷಗಳಿಗೂ ಹೆಚ್ಚು ಕಾಲ ಜೀವಿಸುತ್ತವೆ. ಸಾವು ಯಾರನ್ನೂ ಕೇಳಿ ಬರುವುದಿಲ್ಲ, ಯಾರ ಆಯಸ್ಸೂ ಇಷ್ಟೇ ಎಂದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಗೊತ್ತಿದ್ದರೆ ಅದು ಸಾವಿನ ಅಧಿಪತಿಯಾದ ಯಮಧರ್ಮನಿಗೆ ಮಾತ್ರ. ಲೋಕದಲ್ಲಿ ಎಷ್ಟೇ ಗಳಿಸಿದರೂ ಸಾವನ್ನು ಎದುರಿಸಿ ಉಳಿಯಲು ಯಾರಿಂದಲೂ ಸಾಧ್ಯವಿಲ್ಲ. ದೊರೆಗೂ ಭಿಕಾರಿಗೂ ಸಾವು ಸರಿ ಸಮಾನ. ಸಾವಿನ ಬಗ್ಗೆ ಎಲ್ಲಾ ಧರ್ಮಗಳಲ್ಲಿಯೂ ವಿವಿಧ ರೀತಿಯ ವಿವರಣೆಗಳಿರಬಹುದು, ಆದರೆ ಸಾವಿನ ನಂತರದ ಬದುಕಿಗೆ ಹಾಗೂ ಆತ್ಮ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಆವರಿಸಿಕೊಳ್ಳುವ ವಿಷಯವನ್ನು ಹಲವು ಧರ್ಮಗಳಲ್ಲಿ ವಿವರಣೆ ಸಿಗುತ್ತದೆ. ಸಾವಿನ ಬಗ್ಗೆ ಹಾಗೂ ಸಾವಿನ ಬಳಿಕದ ಜೀವನದ ಬಗ್ಗೆ ಕುತೂಹಲವುಳ್ಳವರಿದ್ದಾರೆ. ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿ ಜೀವಿ ಸಾಯಲೇಬೇಕು. ಇದು ಪ್ರಕೃತಿ ನಿಯಮ. ಈಗ ನಾವು ವೈಜ್ಞಾನಿಕ ಯುಗದಲ್ಲಿದ್ದೇವೆ. ಹೀಗಾಗಿ ನಮ್ಮ ಆಲೋಚನೆಗಳೆಲ್ಲವೂ ವೈಜ್ಞಾನಿಕವಾಗಿಯೇ ಇದೆ. ಹಾಗೆಂದು ಸಾವನ್ನು ಗೆಲ್ಲಲು ಸಾಧ್ಯವೆ? ಖಂಡಿತಾ ಸಾಧ್ಯವಿಲ್ಲ. ಅಂತದ್ದೇನಾರೂ ವ್ಯವಸ್ಥೆ ಇದ್ದಿದ್ದರೆ ಸಿರಿವಂತರಿಗೆ ಸಾವೇ ಇರುತ್ತಿರಲಿಲ್ಲ ಅಲ್ಲವೆ? ಪ್ರತಿನಿತ್ಯ ಸಾಯುವವರನ್ನು ನೋಡುತ್ತಿರುತ್ತೇವೆ. ಸತ್ತವರ ಅಂತ್ಯಕ್ರಿಯೆಗಳಲ್ಲಿಯೂ ಪಾಲ್ಗೊಳ್ಳುತ್ತೇವೆ. ಬದುಕೆಂದರೆ ಇಷ್ಟೆ. ಇವತ್ತು ಅವನು ಸತ್ತ. ಆದರೆ ನಾಳೆ ನಾವು ಸಾಯುತ್ತೇವೆ ಎಂಬುದನ್ನು ಅರಿಯುವುದೇ ಇಲ್ಲ. ನಮ್ಮ ಇವತ್ತಿನ ಬದುಕಿಗೆ ಏನೆಲ್ಲಾ ಬೇಕೋ ಅದನ್ನೆಲ್ಲ ಮಾಡುತ್ತೇವೆ. ಅದರಿಂದ ಮತ್ತೊಬ್ಬನ ಬದುಕಿಗೆ ತೊಂದರೆಯಾದರೂ ಪರ್ವಾಗಿಲ್ಲ. ನಾವು ಚೆನ್ನಾಗಿರಬೇಕೆಂಬ ಸಿದ್ಧಾಂತಕ್ಕೆ ಜೋತು ಬಿದ್ದರುತ್ತೇವೆ. ಒಂದು ಕ್ಷಣ ಸಾವಿನ ಬಗ್ಗೆ ಯೋಚನೆ ಮಾಡಿದ್ದೇ ಆದರೆ ನಾವ್ಯಾಕೆ ಇಂತಹ ನರಕದಲ್ಲಿ ಬದುಕಬೇಕು ಎಂದು ಎನ್ನಿಸದೇ ಇರುವುದಿಲ್ಲ. ಸಾವಿನ ಕುರಿತು ಚಿಂತನೆ ಮಾಡುವವರು ಪರಮಾತ್ಮನ ಸನಿಹವೇ ಇರುತ್ತಾರಂತೆ. ನಿಜ ಹೇಳಬೇಕೆಂದರೆ ಮನುಷ್ಯನ ಜೀವನ ಎಂಬುವುದು ನೀರ ಮೇಲಿನ ಗುಳ್ಳೆಯಂತೆ ಕ್ಷಣಿಕವಾದುದು. ಅದು ಚೆನ್ನಾಗಿ ಗೊತ್ತಿದ್ದರೂ ಇಂದ್ರಿಯಗಳ ಸುಖಗಳ ಬೆನ್ನೇರಿ ಹೋಗಿ ದುಃಖದಲ್ಲಿ ನರಳಾಡುತ್ತೇವೆ. ಇರುವಷ್ಟು ದಿವಸ ಸುಖವಾಗಿ ಬದುಕಲಾಗದೆ ದುಃಖದ ಮಡುವಿನಲ್ಲಿಯೇ ದಿನ ಕಳೆಯುತ್ತೇವೆ. ಲೋಕ ಪರಿತ್ಯಾಗಿಯಾಗಿದ್ದ ಬುದ್ಧನ ಬಳಿಗೆ ಜೀವನದಲ್ಲಿ ವೈರಾಗ್ಯಗೊಂಡ ರಾಜ ಮಹಾರಾಜರು ಬರುತ್ತಿದ್ದರಂತೆ. ಈ ಸಂದರ್ಭ ಭಿಕ್ಷುಗಳಾಗಿ ಬಂದಂತಹ ಅವರನ್ನು ಬುದ್ಧನು ಸ್ಮಶಾನಕ್ಕೆ ಕಳುಹಿಸುತ್ತಿದ್ದನಂತೆ. ಅಲ್ಲಿಗೆ ಹೋದ ಭಿಕ್ಷುಗಳು ಹೆಣಸುಡುವವರನ್ನು ನೋಡುತ್ತಿದ್ದಂತೆ ಅವರಲ್ಲಿ ಬದುಕೆಂದರೆ ಇಷ್ಟೆನಾ? ಎಂಬ ಅರಿವು ಮೂಡುತ್ತಿತ್ತಂತೆ. ದೇಹದ ಮೂಳೆ, ಮಾಂಸಗಳೆಲ್ಲವೂ ಸುಟ್ಟು ಬೂದಿಯಾಗುತ್ತದೆ. ಹಾಗಿದ್ದ ಮೇಲೆ ಈ ಶರೀರ ಶಾಶ್ವತವಲ್ಲ. ಇದು ನಿಜವಾದ ಆನಂದ ನೀಡದು. ಹಾಗಾದರೆ ನಾವು ಸುಟ್ಟು ಬೂದಿಯಾದ ಮೇಲೂ ಇಲ್ಲಿಯೇ ನೆಲೆಸಬೇಕು. ಅದು ಹೇಗೆಂದರೆ ನಾವು ಇಲ್ಲಿರುವಷ್ಟು ದಿನ ಒಳ್ಳೆಯದನ್ನೇ ಮಾಡಬೇಕು. ಆ ಒಳ್ಳೆಯತನ ಜಗತ್ತಿನಿಂದ ಕಣ್ಮರೆಯಾದ ನಂತರವೂ ಮತ್ತೊಬ್ಬರಿಗೆ ಸಹಕಾರಿಯಾಗಬೇಕು. ನಾವು ಸತ್ತ ಮೇಲೆ ನಮ್ಮ ಹೆಸರು ಬದುಕಬೇಕು. ಅದನ್ನು ಬಿಟ್ಟು, ಜಾತಿ, ಆಸ್ತಿ, ಅಂತಸ್ತಿನ ಮದದಲ್ಲಿ ಹೊರಲಾಡುವುದಾದರೂ ಯಾಕೆ. ಹುಟ್ಟಿದ್ದೇವೆ ಎಂಬುವುದು ಎಷ್ಟು ಸತ್ಯವೋ ಸಾವು ಕೂಡ ಅಷ್ಟೇ ಸತ್ಯ. ಅದು ಈಗಲೋ, ಆಗಲೋ ಯಾವ ಕ್ಷಣಕ್ಕೂ ಬರಬಹುದು. ಅದು ನಮ್ಮ ಸುತ್ತಲೂ ಸುತ್ತಾಡುತ್ತಲೇ ಇರುತ್ತದೆ. ಹೀಗಿರುವಾಗ ನಾವು ಮತ್ತೊಬ್ಬರಿಗೆ ಉಪಕಾರಿಯಾಗಿರಬೇಕೇ ವಿನಃ ಅಪಕಾರ ಎಸಗಬಾರದು. ಹುಟ್ಟು ಸಾವಿನ ನಡುವೆ ಅಲ್ಪ ಜೀವಿತಾವಧಿಯಲ್ಲಿ ಸಾಧ್ಯವಾದಷ್ಟು ದಯೆ, ಕರುಣೆ, ಸಹಾನುಭೂತಿ, ಪರೋಪಕಾರಗಳಲ್ಲಿ ಮನಸ್ಸನ್ನು, ದೇಹವನ್ನು ತೊಡಗಿಸಿಕೊಳ್ಳುವುದು ಒಳ್ಳೆಯದು. ಮನುಷ್ಯ ಮನುಷ್ಯನ ಸಂಬಂಧಗಳನ್ನು ಅರಿತು ಮತ್ತೊಬ್ಬರಿಗೆ ತೊಂದರೆ ಮಾಡದೆ ಸಾಧ್ಯವಾದಷ್ಟು ಪರರ ಒಳಿತಿಗಾಗಿ ಸೇವೆ ಮಾಡುತ್ತಾ ಬದುಕುವುದೇ ಮಾನವ ಧರ್ಮ. ಮನುಷ್ಯನಾಗಿ ಹುಟ್ಟಿದಕ್ಕೂ ಸಾರ್ಥಕ. ಇರುವ ನಾಲ್ಕು ದಿನದಲ್ಲಿ ಕಾಮ ಕ್ರೋದ, ಮದ, ಮತ್ಸರದ ಹಂಗಿನಲ್ಲಿ ಬಿದ್ದು ಒದ್ದಾಡಿ ತಾನೇ ಮಾಡಿದ ಪಾಪದ ಬುತ್ತಿಯನ್ನು ಹೊತ್ತುಕೊಂಡು ಆ ದೇವನ ಕರೆ ಬಂದಾಗ ತಿರುಗಿ ನೋಡದೇ ಹೋಗುವ ನಾವೇಕೆ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಾರದು ಅಲ್ಲವೆ? . ಹುಟ್ಟು ಅನಿರೀಕ್ಷಿತ, ಸಾವು ಖಚಿತ. ಇದು ಎಲ್ಲರಿಗೂ ತಿಳಿದಿದೆ. ಆದರೂ ನಾವು ಬದುಕಲು ಹೋರಾಡುತ್ತೇವೆ. ಅಷ್ಟೇ ಅಲ್ಲದೆ ಮತ್ತೊಬ್ಬರನ್ನು ಬಲಿ ತೆಗೆದುಕೊಳ್ಳುತ್ತೇವೆ. ಹುಟ್ಟು ಹಾಗೂ ಸಾವು ಎರಡು ತಪ್ಪಿಸಿಕೊಳ್ಳಲಾಗದ ನೈಜತೆಗಳ ಮಧ್ಯೆಯಿರುವ ಜೀವನ ಮನುಷ್ಯನ ಕೈಯಲ್ಲಿದೆ. ಪರೋಪಕಾರಂ ಇದಂ ಶರೀರಂ ಎನ್ನುವ ಮಾತಿನಂತೆ ಜೀವನದಲ್ಲಿ ಸ್ವಲ್ಪವಾದರೂ ಪರರಿಗೆ ನೀಡುವ ಮಹಾಗುಣವನ್ನು ಬೆಳೆಸಿಕೊಂಡಿರಲೇಬೇಕು. ನಾವು ಈ ಜಗತ್ತಿಗೆ ಏನು ನೀಡುತ್ತೇವೆಯೋ ಅದನ್ನೆ ಮತ್ತೆ ಪಡೆಯುತ್ತೇವೆ ಎಂಬ ಒಂದು ಮಾತಿದೆ. ನಾವು ಮಾಡುವ ಸಣ್ಣ ಸಣ್ಣ ಸಹಾಯವೂ ಕೂಡಾ ಖುಷಿ ನೀಡುತ್ತದೆ. ಉದಾಹರಣೆಗೆ ನಾವು ನಿತ್ಯ ಓಡಾಡುವ ಬಸ್ನಲ್ಲಿ ವಯಸ್ಸಾದವರು, ಕುರುಡರೋ ಕುಂಟರೋ ಬಸ್ ಹತ್ತಬೇಕಿರುತ್ತದೆ. ತ್ರಾಸದಿಂದಲೇ ಬಸ್ ಹತ್ತಲು ಪ್ರಯತ್ನಿಸುತ್ತಿರುತ್ತಾರೆ. ಹಾಗೇ ಅದೇ ಬಸ್ಸಿನಲ್ಲಿ ವಯಸ್ಸಾದವರು, ಗರ್ಭಿಣ ಮಹಿಳೆಯರು, ಅಸಹಾಯಕರು ಇರುತ್ತಾರೆ ಅಂತವರಿಗೆ ಸೀಟು ಬಿಟ್ಟುಕೊಡಬೇಕಾಗುತ್ತದೆ ಎಂದು ಕಂಡೂ ಕಾಣದಂತೆ ವರ್ತಿಸುವ ಬದಲು, ಅವರಿಗೆ ಸಹಾಯ ಹಸ್ತ ನೀಡುವುದರಲ್ಲಿ ಆನಂದವನ್ನು ಕಂಡುಕೊಂಡು ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗೋಣ....
✍ಲಲಿತಶ್ರೀ ಪ್ರೀತಂ ರೈ