ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ದೇಹವನ್ನು ತಂಪಾಗಿಸಲು ಪ್ರಕೃತಿ ನಮಗೆ ನೀಡಿದ ಹಲವಾರು ಕೊಡುಗೆಗಳಲ್ಲಿ ಅತ್ಯುತ್ತಮ ಕೊಡುಗೆ ಎಂದರೆ ಸಿಪ್ಪೆ ತೆಗೆದರೆ ಸ್ಪಟಿಕದಂತೆ ಕಾಣುವ ಇರೋಳ್ ಅಥವಾ ತಾಳೆ ಹಣ್ಣು. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ನೀರಿನಾಂಶವಿದ್ದು, ಸುಡುವ ಬಿಸಿಲಿನಲ್ಲಿ ದೇಹವು ನಿರ್ಜಲೀಕರಣಕ್ಕೊಳಗಾಗದಂತೆ ತಡೆಯುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ತಮಿಳಿಗರು ಇದನ್ನು ತಾಟಿನುಂಗು ಎನ್ನುತ್ತಾರೆ. ತಮಿಳುನಾಡಿನಲ್ಲಿ ಇದರಿಂದ ಹಲವಾರು ಖಾಧ್ಯಗಳನ್ನು ತಯಾರಿಸುತ್ತಾರೆ. ಇದರಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಖನಿಜಾಂಶಗಳು ಸಮೃದ್ಧವಾಗಿದ್ದು, ಬೇಸಿಗೆಯ ಆಯಾಸವನ್ನು ದೂರ ಮಾಡಿ ತಕ್ಷಣದ ಶಕ್ತಿಯನ್ನು ನೀಡುತ್ತದೆ.
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಾದ ಮಲಬದ್ಧತೆ ಮತ್ತು ಎದೆಯುರಿ ನಿವಾರಣೆಗೆ ಇದು ರಾಮಬಾಣವಾಗಿದ್ದು, ಹೊಟ್ಟೆಯನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಕೇವಲ ಒಳಗಿನ ಆರೋಗ್ಯಕ್ಕಷ್ಟೇ ಅಲ್ಲದೆ, ಬೇಸಿಗೆಯಲ್ಲಿ ಕಾಡುವ ಬೆವರುಸಾಲೆ ಮತ್ತು ಚರ್ಮದ ಕೆಂಪು ದದ್ದುಗಳ ಮೇಲೆ ಇದರ ನೀರನ್ನು ಹಚ್ಚುವುದರಿಂದ ಚರ್ಮವು ತಂಪಾಗಿ ತುರಿಕೆ ಕಡಿಮೆಯಾಗುತ್ತದೆ.
ಇದರಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ಇಳಿಸುವವರಿಗೂ ಇದು ಸೂಕ್ತವಾದ ಆಹಾರವಾಗಿದೆ. ಎಳೆಯದಾದ ಮತ್ತು ಮೃದುವಾದ ಇರೋಳ್ ನ್ನು ಆರಿಸಿಕೊಂಡು ತಾಜಾವಾಗಿ ಸೇವಿಸುವುದರಿಂದ ಬೇಸಿಗೆಯ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.
✍ ಲಲಿತಶ್ರೀ ಪ್ರೀತಂ ರೈ