image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಶೇಖ್ ಹಸೀನಾ ಹಸ್ತಾಂತರಕ್ಕೆ ಪಟ್ಟು: ಪ್ರಧಾನಿ ತಾರಿಕ್ ರೆಹಮಾನ್ ಭಾರತ ಭೇಟಿ ಅನಿಶ್ಚಿತ

ಶೇಖ್ ಹಸೀನಾ ಹಸ್ತಾಂತರಕ್ಕೆ ಪಟ್ಟು: ಪ್ರಧಾನಿ ತಾರಿಕ್ ರೆಹಮಾನ್ ಭಾರತ ಭೇಟಿ ಅನಿಶ್ಚಿತ

ಢಾಕ : ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಇತರ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಹಸ್ತಾಂತರಿಸದ ಹೊರತು ಪ್ರಧಾನಿ ತಾರಿಕ್ ರೆಹಮಾನ್ ಅವರ ಭಾರತ ಭೇಟಿ ಸಾಧ್ಯವಿಲ್ಲ ಎಂದು ಬಾಂಗ್ಲಾದೇಶ ಸರ್ಕಾರ ಸ್ಪಷ್ಟಪಡಿಸಿದೆ. ಇದರಿಂದಾಗಿ ಮುಂಬರುವ ಬ್ರಿಕ್ಸ್ (BRICS) ಶೃಂಗಸಭೆಯ ವೇಳೆಗೆ ಬಾಂಗ್ಲಾದೇಶ ಪ್ರಧಾನಿಯವರ ಭಾರತ ಭೇಟಿ ಅನಿಶ್ಚಿತತೆಯತ್ತ ಸಾಗಿದೆ. ಕಳೆದ ಕೆಲವು ವಾರಗಳಿಂದ ಉಭಯ ದೇಶಗಳ ನಡುವೆ ಪ್ರಧಾನಿ ತಾರಿಕ್ ರೆಹಮಾನ್ ಅವರ ಪ್ರವಾಸ ಕುರಿತು ದ್ವಿಪಕ್ಷೀಯ ಮಾತುಕತೆಗಳು ನಡೆಯುತ್ತಿದ್ದವು. ಆದರೆ, ಆಗಸ್ಟ್ 5 ರಂದು ನವದೆಹಲಿಯಲ್ಲಿ ಶೇಖ್ ಹಸೀನಾ ಅವರು ನಡೆಸಿದ ಸಾರ್ವಜನಿಕ ಪತ್ರಿಕಾಗೋಷ್ಠಿಯು ಈ ಮಾತುಕತೆಯ ಪ್ರಕ್ರಿಯೆಗೆ ಹಿನ್ನಡೆ ಉಂಟುಮಾಡಿದೆ ಎಂದು ಭಾರತದಲ್ಲಿ ನೆಲೆಸಿರುವ ಹಸೀನಾ ಅವರ ಹೇಳಿಕೆಗಳು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ವಾತಾವರಣವನ್ನು ಕೆಡಿಸಿವೆ ಎಂದು ಢಾಕಾ ಆರೋಪಿಸಿದೆ.

ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದ ಪ್ರಕಾರ ಶೇಖ್ ಹಸೀನಾ, ಇತರ ಅಪರಾಧಿಗಳು ಹಾಗೂ ಶಾಹೀದ್ ಶರೀಫ್ ಉಸ್ಮಾನ್ ಹಾದಿ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಹಸ್ತಾಂತರಿಸುವಂತೆ ಬಾಂಗ್ಲಾದೇಶವು ಭಾರತ ಸರ್ಕಾರವನ್ನು ಕೋರಿದ್ದು, ಅಧಿಕೃತ ಪ್ರತಿಕ್ರಿಯೆಗೆ ಕಾಯುತ್ತಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಆಹ್ವಾನವಿದ್ದರೂ, ಪ್ರತ್ಯೇಕ ದ್ವಿಪಕ್ಷೀಯ ಭೇಟಿಗೆ ಆದ್ಯತೆ ನೀಡುವುದಾಗಿ ಭಾರತದ ಹೈಕಮಿಷನರ್ ದಿನೇಶ್ ತ್ರಿವೇದಿ ಅವರಿಗೆ ಢಾಕಾ ತಿಳಿಸಿತ್ತು. ಪ್ರಸ್ತುತ ಈ ಭೇಟಿಯನ್ನು ಹಸೀನಾ ಹಸ್ತಾಂತರದ ಬೇಡಿಕೆಯೊಂದಿಗೆ ಬಾಂಗ್ಲಾದೇಶ ಸಂಯೋಜಿಸಿದೆ. ಆಗಸ್ಟ್ 2024 ರ ಜನಕ್ರೋಶದ ನಂತರ ಭಾರತದಲ್ಲಿ ಆಶ್ರಯ ಪಡೆದಿರುವ ಹಸೀನಾ, ಇತ್ತೀಚೆಗೆ ಡಿಸೆಂಬರ್ 2026 ರಲ್ಲಿ ಬಾಂಗ್ಲಾಕ್ಕೆ ಮರಳಿ ಪ್ರಜಾಪ್ರಭುತ್ವ ಮರುಸ್ಥಾಪಿಸುವುದಾಗಿ ಪ್ರಕಟಿಸಿ, ತಾರಿಕ್ ರೆಹಮಾನ್ ಸರ್ಕಾರ ಹಾಗೂ ಪ್ರೊ. ಮುಹಮ್ಮದ್ ಯೂನಸ್ ನೇತೃತ್ವದ ಹಿಂದಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇನ್ನೊಂದೆಡೆ, ತನ್ನ 'ಬಾಂಗ್ಲಾದೇಶ ಫಸ್ಟ್' ವಿದೇಶಾಂಗ ನೀತಿಯಡಿ ಸಾರ್ವಭೌಮತ್ವ ಹಾಗೂ ಸಮಾನತೆಯ ಆಧಾರದ ಮೇಲೆ ಭಾರತವೂ ಸೇರಿದಂತೆ ಎಲ್ಲಾ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಮುಂದುವರಿಸುವುದಾಗಿ ಬಾಂಗ್ಲಾದೇಶ ಪುನರುಚ್ಚರಿಸಿದೆ. ಹಸೀನಾ ಹಸ್ತಾಂತರದ ಮನವಿ ಪ್ರಸ್ತುತ ಪರಿಶೀಲನೆಯಲ್ಲಿದೆ ಎಂದು ಭಾರತ ಸರ್ಕಾರ ತಿಳಿಸಿದೆ.

Category
ಕರಾವಳಿ ತರಂಗಿಣಿ