ರಷ್ಯಾ : ಉಕ್ರೇನ್ನ ಸರ್ಕಾರಿ ಸ್ವಾಮ್ಯದ ಓಸ್ಚಾಡ್ಬ್ಯಾಂಕ್ನೊಂದಿಗಿನ ಹೂಡಿಕೆ ಒಪ್ಪಂದದ ವಿವಾದ ಇತ್ಯರ್ಥಕ್ಕಾಗಿ, ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ. ಚಂದ್ರಚೂಡ್ ಅವರನ್ನು ರಷ್ಯಾ ಸರ್ಕಾರವು ತನ್ನ ಪರ ಮಧ್ಯಸ್ಥಗಾರರನ್ನಾಗಿ (Arbitrator) ನೇಮಿಸಿದೆ.
'ಗ್ಲೋಬಲ್ ಆರ್ಬಿಟ್ರೇಷನ್ ರಿವ್ಯೂ' ವರದಿಯನ್ನು ಉಲ್ಲೇಖಿಸಿ 'ಬಾರ್ ಮತ್ತು ಬೆಂಚ್' ನೀಡಿದ ಮಾಹಿತಿಯಂತೆ, ಈ ಮೂವರು ಸದಸ್ಯರ ಅಂತರರಾಷ್ಟ್ರೀಯ ನ್ಯಾಯಮಂಡಳಿಯ ಅಧ್ಯಕ್ಷರಾಗಿ ಕೋಸ್ಟಾರಿಕಾದ ಮಾಜಿ ವಾಣಿಜ್ಯ ಸಚಿವೆ ಹಾಗೂ ಮಧ್ಯಸ್ಥಗಾರ್ತಿ ಡಯಾಲಾ ಜಿಮೆನೆಜ್ ಕಾರ್ಯಾಚರಿಸಲಿದ್ದಾರೆ. ರಷ್ಯಾ ಮತ್ತು ಓಸ್ಚಾಡ್ಬ್ಯಾಂಕ್ ಎರಡೂ ಜಂಟಿಯಾಗಿ ಜಿಮೆನೆಜ್ ಅವರನ್ನು ನ್ಯಾಯಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿವೆ. ನ್ಯಾಯಮಂಡಳಿಯ ಮೂರನೇ ಸದಸ್ಯರಾಗಿ ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಗ್ರೀಕ್ ಮಧ್ಯಸ್ಥಗಾರ ಸ್ಟಾವ್ರೋಸ್ ಬ್ರೆಕೌಲಾಕಿಸ್ ಅವರನ್ನು ಓಸ್ಚಾಡ್ಬ್ಯಾಂಕ್ ನೇಮಿಸಿದೆ. 1998ರ ರಷ್ಯಾ-ಉಕ್ರೇನ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ನಿಯಮಾವಳಿಗಳ ಅಡಿಯಲ್ಲಿ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳಿಂದಾಗಿ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಝಿಯಾ ಪ್ರದೇಶಗಳಲ್ಲಿ ತನಗೆ ಸೇರಿದ ನೂರಾರು ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹಾಗೂ ಬ್ಯಾಂಕಿಂಗ್ ಕಾರ್ಯಾಚರಣೆಗಳು ನಷ್ಟವಾಗಿವೆ ಎಂದು ಓಸ್ಚಾಡ್ಬ್ಯಾಂಕ್ ನ್ಯಾಯಮಂಡಳಿಯಲ್ಲಿ ದಾವೆ ಹೂಡಿದೆ. 2025ರ ಜುಲೈನಲ್ಲಿ ರಷ್ಯಾಕ್ಕೆ ನೀಡಲಾಗಿದ್ದ ವಿವಾದದ ನೋಟೀಸ್ಗೆ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಓಸ್ಚಾಡ್ಬ್ಯಾಂಕ್ ಈ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.