ನ್ಯೂಯಾರ್ಕ್ : ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ಅವಕಾಶ ಸಿಕ್ಕರೆ, ಭಾರತದ ಅತ್ಯಮೂಲ್ಯ 'ಕೊಹಿನೂರ್' ವಜ್ರವನ್ನು ಮರಳಿ ನೀಡುವಂತೆ ಒತ್ತಾಯಿಸುವುದಾಗಿ ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಹೇಳಿದ್ದಾರೆ. 9/11ರ ಉಗ್ರರ ದಾಳಿಯ ಸಂತ್ರಸ್ತರ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕಕ್ಕೆ ಭೇಟಿ ನೀಡಿರುವ ಬ್ರಿಟನ್ ದೊರೆಯನ್ನು ಭೇಟಿಯಾದಾಗ ನೀವು ಏನು ಕೇಳಲು ಬಯಸುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಮ್ದಾನಿ, "ಐತಿಹಾಸಿಕ ಪ್ರಾಮುಖ್ಯತೆಯ ಕೊಹಿನೂರ್ ವಜ್ರವನ್ನು ಅದರ ಮೂಲ ದೇಶಕ್ಕೆ ಹಿಂದಿರುಗಿಸುವ ಬಗ್ಗೆ ನಾನು ಪ್ರಸ್ತಾಪಿಸುತ್ತೇನೆ" ಎಂದು ತಿಳಿಸಿದರು.
ದಿನದ ಅಂತ್ಯದಲ್ಲಿ ಮಮ್ದಾನಿ ಅವರು ಬ್ರಿಟನ್ ರಾಜ ಚಾರ್ಲ್ಸ್ ಅವರನ್ನು ಭೇಟಿಯಾಗಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಅವರು ವಜ್ರದ ವಿಚಾರವನ್ನು ಚರ್ಚಿಸಿದ್ದಾರೆಯೇ ಅಥವಾ ಬೇರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಸುಮಾರು 105.6 ಕ್ಯಾರೆಟ್ ತೂಕದ ಈ ಜಗತ್ಪ್ರಸಿದ್ಧ ಕೊಹಿನೂರ್ ವಜ್ರವು 1849ರಲ್ಲಿ ಮಹಾರಾಜ ದುಲೀಪ್ ಸಿಂಗ್ ಅವರಿಂದ ಬ್ರಿಟನ್ನ ರಾಣಿ ವಿಕ್ಟೋರಿಯಾ ಅವರಿಗೆ ಹಸ್ತಾಂತರವಾಗಿತ್ತು. 1937ರಲ್ಲಿ ಇದನ್ನು ಬ್ರಿಟನ್ನ ರಾಜಮಾತೆಯ ಕಿರೀಟದಲ್ಲಿ ಅಳವಡಿಸಲಾಯಿತು. ಅಂದಿನಿಂದ ಇಂದಿನವರೆಗೂ ಈ ವಜ್ರವು ಬ್ರಿಟನ್ ವಶದಲ್ಲಿದೆ. ಭಾರತ ಸರ್ಕಾರವು ತನ್ನ ಈ ಐತಿಹಾಸಿಕ ಆಸ್ತಿಯನ್ನು ಮರಳಿ ಪಡೆಯಲು ದಶಕಗಳಿಂದ ಅನೇಕ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುತ್ತಾ ಬಂದಿದೆ. ಈ ವಜ್ರವು ಇತಿಹಾಸದಲ್ಲಿ ಮೊಘಲರು, ಇರಾನ್ ಷಾಗಳು, ಅಫ್ಘಾನಿಸ್ತಾನದ ಎಮಿರರು ಹಾಗೂ ಸಿಖ್ ಮಹಾರಾಜರ ಒಡೆತನದಲ್ಲಿತ್ತು ಎಂಬುದು ಉಲ್ಲೇಖನೀಯ. ಸದ್ಯ ಲಂಡನ್ನ ಅರಮನೆಯಲ್ಲಿ ಈ ವಜ್ರವನ್ನು ಸುರಕ್ಷಿತವಾಗಿ ಇರಿಸಲಾಗಿದೆ. ಮಮ್ದಾನಿ ಅವರ ಈ ಹೇಳಿಕೆಯು ಈಗ ಜಾಗತಿಕ ಮಟ್ಟದಲ್ಲಿ ಮತ್ತೆ ಕೊಹಿನೂರ್ ವಜ್ರದ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.