ಟೆಲ್ಅವೀವ್ : 1996ರಲ್ಲಿ ಹಿಜ್ಜುಲ್ಲಾ ಉಗ್ರರ ಕೈಗೆ ಸಿಕ್ಕಿ ಸಾವಿಗೀಡಾಗಿದ್ದ ತನ್ನ ಅಧಿಕಾರಿ ರಾನ್ ಅರಾಡ್ನ ಅಂತಿಮ ಅವಶೇಷ ವಾಪಸ್ ತರಲೆಂದೇ ಇಸ್ರೇಲ್ ಶನಿವಾರ ರಾತ್ರಿ ಲೆಬನಾನ್ ನೆಲದಲ್ಲಿ ಬೆಚ್ಚಿಬೀಳಿಸುವ ಸೇನಾ ಕಾರ್ಯಾಚರಣೆ ನಡೆಸಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶದಂತೆ ಲೆಬನಾನ್ನೊಳಗೆ ನುಗ್ಗಿದ ಇಸ್ರೇಲ್ ಕಮಾಂಡೋ ಪಡೆಗಳು ರಾನ್ ಆರಾಡ್ನನ್ನು ಸಮಾಧಿ ಮಾಡಲಾಗಿತ್ತು ಎನ್ನಲಾದ ಸ್ಥಳದಲ್ಲಿ ಅವಶೇಷಗಳಿಗಾಗಿ ಹುಡುಕಾಟ ನಡೆಸಿ ಕೊನೆಗೆ ಬರಿಗೈಯಲ್ಲಿ ವಾಪಸ್ ಬಂದಿವೆ. 1986ರ ಅ.16ರಂದು ಇಸ್ರೇಲ್ ಯುದ್ಧ ವಿಮಾನವೊಂದು ತಾಂತ್ರಿಕ ಕಾರಣಗಳಿಂದ ಲೆಬನಾನ್ನಲ್ಲಿ ಪತನವಾಗಿತ್ತು. ಆ ವೇಳೆ ಇಸ್ರೇಲ್ನ ಶಸ್ತ್ರಾಸ್ತ್ರ ಅಧಿಕಾರಿ ರಾನ್ ಅರಾಡ್ ನಾಪತ್ತೆಯಾಗಿದ್ದರೆ, ಪೈಲಟ್ ನನ್ನು ರಕ್ಷಣೆ ಮಾಡಲಾಗಿತ್ತು. ತರುವಾಯ ಅರಾಡ್ ಲೆಬನಾನ್ ಉಗ್ರರ ವಶದಲ್ಲಿರುವ ಫೋಟೋ ಬಹಿರಂಗವಾಗಿತ್ತು. ಆತನ ಬಿಡುಗಡೆಗೆ ಯತ್ನ ನಡೆಯಿತಾದರೂ 1990ರ ಸುಮಾರಿಗೆ ಆತ ಉಗ್ರರ ವಶದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆತನನ್ನು ಜೀವಂತವಾಗಿ ವಾಪಸ್ ತರಲು ಸಾಧ್ಯವಾಗಿಲ್ಲ, ಆದರೆ, ಮೃತದೇಹದ ಅವಶೇಷವನ್ನಾದರೂ ವಾಪಸ್ ತರುವುದಾಗಿ ಹೇಳಿದ್ದ ನೆತನ್ಯಾಹು ಅವರು ಇರಾನ್ ಜತೆಗಿನ ಯುದ್ಧದ ನಡುವೆಯೇ ಶನಿವಾರ ರಾತ್ರಿ ವಿಶೇಷ ಕಾರ್ಯಾಚರಣೆಗೆ ಸೂಚನೆ ನೀಡಿದ್ದರು.
ಅದರಂತೆ ಇಸ್ರೇಲ್ ಕಮಾಂಡೋಗಳಿದ್ದ 4 ಕಾಪ್ಟರ್ಗಳು ರಾತ್ರಿ ಸಿರಿಯಾ-ಲೆಬನಾನ್ ಗಡಿಯಲ್ಲಿರುವ ಹಿಬ್ಬುಲ್ಲಾದ ಬಲಿಷ್ಠ ಕೋಟೆ ನಬಿಚಿಟ್ ನಗರಕ್ಕೆ ನುಗ್ಗಿ ಸಮಾಧಿ ಸ್ಥಳದಲ್ಲಿ ಅವಶೇಷಗಳಿಗಾಗಿ ಹುಡುಕಾಟ ನಡೆಸಿವೆ. ಹಲವು ಆಡಿ ಗುಂಡಿ ತೋಡಿ ಹುಡುಕಾಡಿದರೂ ಪ್ರಯೋಜನವಾಗದಾಗ ಬರಿಗೈಯಲ್ಲಿ ವಾಪಸ್ ಬಂದಿದೆ. ಕಾರ್ಯಾಚರಣೆ ವೇಳೆ ಇಸ್ರೇಲ್ ಕಮಾಂಡೋಗಳು ಮತ್ತು ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಇದೇ ವೇಳೆ ಇಸ್ರೇನ್ ಸೇನೆ ಕಮಾಂಡೋಪಡೆಗಳ ಬೆನ್ನಿಗೆ ನಿಂತು ನಡೆಸಿದ ವೈಮಾನಿಕ ದಾಳಿಯಲ್ಲಿ 41ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.