ಢಾಕಾ: ಭಾರತದ ನೆರೆಯ ದೇಶ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಸಹದ್ಯೋಗಿಯೊಬ್ಬರೇ ಹಿಂದೂ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜರುಗಿದೆ. ಮೈಮೆನ್ಶಿಂಘೋದಲ್ಲಿ ಭಜೇಂದ್ರ ಬಿಸ್ವಾಸ್(40) ಎನ್ನುವವರನ್ನು ಸಹದ್ಯೋಗಿಯೊಬ್ಬರೇ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಇದೇ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೀಪು ಚಂದ್ರದಾಸ್ ಎನ್ನುವವರನ್ನು ಇತ್ತೀಚೆಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಆರೋಪಿಯನ್ನು ನೋಮನ್ ಮಿಯಾ ಎಂದು ಗುರುತಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಜೇಂದ್ರ ಬಿಸ್ವಾಸ್ ಅವರು ಸುಲ್ತಾನಾ ಸ್ವೀಟರ್ಸ್ ಲಿಮಿಟೆಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ 6.30ರ ವೇಳೆಗೆ ಕೆಲಸ ಮಾಡುತ್ತಿದ್ದ ವೇಳೆ ನೋಮನ್ ಮಿಯಾ ಅವರು ಬಿಸ್ವಾಸ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಭಜೇಂದ್ರ ಬಿಸ್ವಾಸ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗುಂಡಿನ ದಾಳಿಗೂ ಮುನ್ನ ಅವರಿಬ್ಬರ ನಡುವೆ ಯಾವುದೇ ಗಲಾಟೆಯಾಗಿರಲಿಲ್ಲ ಎಂದು ಸಹದ್ಯೋಗಿಗಳು ತಿಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಭಜೇಂದ್ರ ಬಿಸ್ವಾಸ್ ಅವರು ಆಸ್ಪತ್ರೆಗೆ ದಾಖಲಾಗುವ ವೇಳೆಗೆ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಕಳೆದ ಒಂದೇ ವಾರದಲ್ಲಿ ಮೂವರು ಹಿಂದೂ ವ್ಯಕ್ತಿಗಳ ಕೊಲೆಯಾಗಿದೆ.