ನೇಪಾಳ : ಮಾನವ ನಿರ್ಮಿತ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮಾಲಯದ ಹಿಮನದಿಗಳು ವೇಗವಾಗಿ ಕರಗುತ್ತಿದ್ದು, ಪರ್ವತಗಳ ಇಳಿಜಾರುಗಳು ಅಸ್ಥಿರಗೊಳ್ಳುತ್ತಿವೆ. ಆಗಸ್ಟ್ 26ರಂದು ನೆಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ವಿನಾಶಕ್ಕೆ ಈ ದೀರ್ಘಕಾಲೀನ ಹವಾಮಾನ ಬದಲಾವಣೆಯೇ ಪ್ರಮುಖ ಕಾರಣವೆಂದು 'ವರ್ಲ್ಡ್ ವೆದರ್ ಅಟ್ರಿಬ್ಯೂಷನ್' ಸಂಸ್ಥೆಯ ಇತ್ತೀಚಿನ ವಿಶ್ಲೇಷಣೆ ಉಲ್ಲೇಖಿಸಿದೆ.
ಈ ದುರಂತಕ್ಕೆ ಹವಾಮಾನ ಬದಲಾವಣೆಯೊಂದೇ ಏಕೈಕ ಕಾರಣವಲ್ಲದಿದ್ದರೂ, 2015ರ ನೆಪಾಳ ಭೂಕಂಪವು ಬಂಡೆಗಳನ್ನು ದುರ್ಬಲಗೊಳಿಸಿತ್ತು. ಆದರೆ ತಾಪಮಾನ ಏರಿಕೆಯು ದಶಕಗಳಿಂದ ಈ ದುರ್ಬಲತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ನೆಪಾಳ ಮತ್ತು ಚೀನಾ ಗಡಿಯ ಸಮೀಪ ಬೃಹತ್ ಪ್ರಮಾಣದ ಬಂಡೆ ಹಾಗೂ ಮಂಜುಗಡ್ಡೆ ಕುಸಿದ ಪರಿಣಾಮವಾಗಿ ತ್ರಿಶೂಲಿ ನದಿಯಲ್ಲಿ ಭೀಕರ ಪ್ರವಾಹ ಉಂಟಾಗಿ 1,300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 5,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ ಘಟನೆಯಿಂದಾಗಿ ಕೋಟ್ಯಂತರ ಡಾಲರ್ ಮೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ.
ಹಿಮಾಲಯನ್ ವ್ಯಾಪ್ತಿಯಲ್ಲಿ ಏರುತ್ತಿರುವ ತಾಪಮಾನವು 'ಪರ್ಮಾಫ್ರಾಸ್ಟ್' ಎಂದರೆ ಪರ್ವತದ ಬಂಡೆಗಳನ್ನು ಬಿಗಿಯಾಗಿ ಹಿಡಿದಿಡುವ ಹೆಪ್ಪುಗಟ್ಟಿದ ನೆಲವನ್ನು ಕರಗಿಸುತ್ತಿದೆ. ಇಂಪೀರಿಯಲ್ ಕಾಲೇಜ್ ಲಂಡನ್ನ ಹವಾಮಾನ ಸಂಶೋಧಕ ಬೆನ್ ಕ್ಲಾರ್ಕ್ ಪ್ರಕಾರ, ಇದು ತೀವ್ರ ಹವಾಮಾನ ಘಟನೆಯಷ್ಟೇ ಅಲ್ಲದೆ, ಸ್ವತಃ ಪರ್ವತಗಳ ಸ್ಥಿರತೆಯ ಮೇಲಾಗುತ್ತಿರುವ ದೀರ್ಘಕಾಲೀನ ಹವಾಮಾನ ಬದಲಾವಣೆಯ ಸ್ಪಷ್ಟ ಕುರುಹಾಗಿದೆ.
ಗ್ರಾಜ್ ವಿಶ್ವವಿದ್ಯಾಲಯದ ಭೂವಿಜ್ಞಾನಿ ಜಾಕೋಬ್ ಸ್ಟೈನರ್ ತಿಳಿಸಿರುವಂತೆ, 5,000 ಮೀಟರ್ ಎತ್ತರದ ಪ್ರದೇಶಗಳಲ್ಲಿನ ಬಂಡೆಗಳು ಮತ್ತು ನೆಲದ ಭಾಗಗಳು ಈಗ ವರ್ಷವಿಡೀ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಉಳಿಯುತ್ತಿಲ್ಲ. ಇದರಿಂದ ನೂರಾರು ವರ್ಷಗಳಿಂದ ಮಂಜುಗಡ್ಡೆಯ ಅಡಿಯಲ್ಲಿದ್ದ ನೆಲ ದುರ್ಬಲಗೊಳ್ಳುತ್ತಿದೆ. 1990ರ ದಶಕದಿಂದೀಚೆಗೆ 'ಲಾಂಗ್ಟಾಂಗ್ ಲಿರುಂಗ್' ಹಿಮನದಿಯು ಅರ್ಧ ಕಿಲೋಮೀಟರ್ನಷ್ಟು ಹಿಂದಕ್ಕೆ ಸರಿದಿದ್ದು, ಮಂಜಿನಡಿಯಿದ್ದ ದುರ್ಬಲ ಬಂಡೆಗಳು ಬಹಿರಂಗಗೊಂಡಿವೆ.
ಧ್ರುವ ಪ್ರದೇಶಗಳನ್ನು ಹೊರತುಪಡಿಸಿದರೆ ಹಿಮಾಲಯವು ವಿಶ್ವದಲ್ಲೇ ಅತಿ ಹೆಚ್ಚು ಹಿಮರಾಶಿಯನ್ನು ಹೊಂದಿದೆ. ಈ ಭಾಗದ 63,000ಕ್ಕೂ ಹೆಚ್ಚು ಹಿಮನದಿಗಳು ಏಷ್ಯಾದ 10 ಪ್ರಮುಖ ನದಿ ವ್ಯವಸ್ಥೆಗಳಿಗೆ ಹಾಗೂ ಶತಕೋಟಿ ಜನರ ಆಹಾರ, ನೀರು ಮತ್ತು ಜೀವನೋಪಾಯಕ್ಕೆ ಆಧಾರವಾಗಿವೆ. ಆದರೆ 4,500 ರಿಂದ 6,000 ಮೀಟರ್ ಎತ್ತರದಲ್ಲಿರುವ ಶೇಕಡಾ 78 ರಷ್ಟು ಹಿಮನದಿ ಪ್ರದೇಶಗಳು ಜಾಗತಿಕ ತಾಪಮಾನಕ್ಕೆ ತೀವ್ರವಾಗಿ ತುತ್ತಾಗುತ್ತಿದ್ದು, ವಿಶ್ವಸಂಸ್ಥೆಯ ವರದಿ ಪ್ರಕಾರ 2000 ರಿಂದ 2019 ರ ನಡುವೆ ಪ್ರತಿ ವರ್ಷ 267 ಶತಕೋಟಿ ಟನ್ ಮಂಜುಗಡ್ಡೆ ನಷ್ಟವಾಗಿದೆ.