image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಫಸಲ್ ಬಿಮಾ ಯೋಜನೆ: ಬ್ಯಾಂಕ್, ಏಜೆನ್ಸಿಗಳ ನಿರಾಸಕ್ತಿಗೆ ರೈತರ ಅಳಲು

ಫಸಲ್ ಬಿಮಾ ಯೋಜನೆ: ಬ್ಯಾಂಕ್, ಏಜೆನ್ಸಿಗಳ ನಿರಾಸಕ್ತಿಗೆ ರೈತರ ಅಳಲು

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಅಭಾವದಿಂದ ಬೆಳೆ ನಷ್ಟದ ಭೀತಿ ಎದುರಿಸುತ್ತಿರುವ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಆಸರೆಯಾಗಬೇಕಿತ್ತು. ಆದರೆ, ಯೋಜನೆಯ ಅನುಷ್ಠಾನದಲ್ಲಿ ಬ್ಯಾಂಕ್‌ಗಳು ಮತ್ತು ಸರ್ಕಾರದ ವಿವಿಧ ಸೇವಾ ಏಜೆನ್ಸಿಗಳು ತೀವ್ರ ನಿರಾಸಕ್ತಿ ತೋರುತ್ತಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಕೇವಲ 5 ಜಿಲ್ಲೆಗಳಲ್ಲಿ ಮಾತ್ರ ವಾಡಿಕೆ ಮಳೆಯಾಗಿದೆ. ಈ ಬಾರಿ 84.10 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತಾದರೂ, ವಾಸ್ತವದಲ್ಲಿ ಕೇವಲ 43.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆ ಅಭಾವದ ನಡುವೆಯೂ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬಿತ್ತನೆ ಮಾಡಿರುವ ಬೆಳೆ ಕೈಸೇರುವ ನಿರೀಕ್ಷೆ ಇಲ್ಲದಂತಾಗಿದೆ. ಹೀಗಾಗಿ, ನಷ್ಟದಿಂದ ಬಚಾವಾಗಲು ರೈತರು ಬೆಳೆ ವಿಮಾ ಕಂತು ಪಾವತಿಸಲು ಸಮೀಪದ ಬ್ಯಾಂಕ್ ಹಾಗೂ ಗ್ರಾಹಕ ಸೇವಾ ಕೇಂದ್ರಗಳ ಬಾಗಿಲು ತಟ್ಟುತ್ತಿದ್ದಾರೆ.

ಆದರೆ, ಬ್ಯಾಂಕ್ ಅಧಿಕಾರಿಗಳು ಬೆಳೆ ಸಾಲ ಪಡೆದ ರೈತರಿಂದ ಮಾತ್ರ ವಿಮಾ ಕಂತು ಸ್ವೀಕರಿಸಲಾಗುವುದು ಎಂಬ ಷರತ್ತು ವಿಧಿಸಿ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯ ನೆಪ ಹೇಳುವ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಉತ್ತರಿಸುತ್ತಿರುವುದರಿಂದ ಗ್ರಾಮೀಣ ಭಾಗದ ರೈತರು ನಿರಾಶರಾಗಿ ಹಿಂತಿರುಗುತ್ತಿದ್ದಾರೆ. ಇನ್ನೊಂದೆಡೆ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಹಕ ಸೇವಾ ಕೇಂದ್ರಗಳ (ಸಿಎಸ್‌ಸಿ) ಸಿಬ್ಬಂದಿಗೆ ಈ ಯೋಜನೆಯ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲವಾಗಿದೆ. ವಿಮಾ ಕಂತು ಪಾವತಿಸಲು ಬರುವ ರೈತರಿಗೇ "ಹಾಗೆಂದರೇನು?" ಎಂದು ಮರುಪ್ರಶ್ನೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ರೈತ ಸಂಪರ್ಕ ಕೇಂದ್ರಗಳ (ಆರ್‌ಎಸ್‌ಕೆ) ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಅಗತ್ಯ ದಾಖಲೆಗಳ ಮಾಹಿತಿ ನೀಡದೆ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ರೈತರು ಪ್ರಶ್ನಿಸಿದಾಗ ಬ್ಯಾಂಕ್ ಅಥವಾ ಗ್ರಾಹಕ ಸೇವಾ ಕೇಂದ್ರಗಳ ಕಡೆಗೆ ಬೆರಳು ಮಾಡಿ ಸುಮ್ಮನಾಗುತ್ತಿದ್ದಾರೆ. ಕೇವಲ ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಸರ್ಕಾರಿ ಕರಪತ್ರಗಳನ್ನು ಹಂಚಿಕೊಂಡು ಅಧಿಕಾರಿಗಳು ಕೈತೊಳೆದುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಕೃಷಿ ಸಚಿವರು ಇಲ್ಲದಿರುವುದು ಸಹ ಕೃಷಿ ಚಟುವಟಿಕೆಗಳ ಮೇಲ್ವಿಚಾರಣೆ ಮೇಲೆ ಪರಿಣಾಮ ಬೀರಿದೆ.

ವಾಡಿಕೆಯಾಗಿ 51.33 ಲಕ್ಷ ಹೆಕ್ಟೇರ್ ಹಾಗೂ 2025ರ ಅವಧಿಯಲ್ಲಿ 57.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿತ್ತು. ಈ ಬಾರಿ ತೀವ್ರ ಮಳೆ ಕೊರತೆಯಿರುವುದರಿಂದ ಬೆಳೆ ವಿಮೆ ಒಂದೇ ರೈತರ ಕೊನೆಯ ಭರವಸೆಯಾಗಿದೆ. ಯೋಜನೆ ಅಡಿಯಲ್ಲಿ ವಿವಿಧ ಬೆಳೆಗಳಿಗೆ ನಿಗದಿಪಡಿಸಲಾದ ಪ್ರೀಮಿಯಂ ದರಗಳ ವಿವರ ಇಂತಿದೆ:

 * ನೀರಾವರಿ ಭತ್ತ: ರೂ. 2,196

 * ಮಳೆ ಆಶ್ರಿತ ರಾಗಿ: ರೂ. 1,009

 * ಮಳೆ ಆಶ್ರಿತ ಶೇಂಗಾ: ರೂ. 1,322

 * ಮಳೆ ಆಶ್ರಿತ ಹುರುಳಿ: ರೂ. 475

 * ನೀರಾವರಿ ಮೆಕ್ಕೆಜೋಳ: ರೂ. 1,365

 * ಮಳೆ ಆಶ್ರಿತ ತೊಗರಿ: ರೂ. 1,165

 * ಟೊಮ್ಯಾಟೊ: ರೂ. 8,586

 * ನೀರಾವರಿ ಹತ್ತಿ: ರೂ. 4,369

 * ಮಳೆ ಆಶ್ರಿತ ಹತ್ತಿ: ರೂ. 3,019

 * ನೀರಾವರಿ ಈರುಳ್ಳಿ: ರೂ. 4,748

 * ಮಳೆ ಆಶ್ರಿತ ಈರುಳ್ಳಿ: ರೂ. 4,328

 * ಮಳೆ ಆಶ್ರಿತ ಸಜ್ಜೆ: ರೂ. 703

ಬೆಳೆ ಕೈಕೊಡುವ ಭೀತಿಯಲ್ಲಿರುವಾಗ, ವಿಮಾ ಕಂತು ಪಾವತಿಸಲು ಬಂದ ರೈತರಿಗೆ ಬ್ಯಾಂಕ್‌ಗಳು ಹಾಗೂ ಸೇವಾ ಕೇಂದ್ರಗಳು ಅಡೆತಡೆ ಉಂಟುಮಾಡದೆ ತಕ್ಷಣವೇ ಸ್ಪಂದಿಸಿ ಸೌಲಭ್ಯ ಕಲ್ಪಿಸಬೇಕೆಂಬುದು ಸಂಕಷ್ಟದಲ್ಲಿರುವ ರೈತರ ಒಕ್ಕೊರಲಿನ ಆಗ್ರಹವಾಗಿದೆ.

Category
ಕರಾವಳಿ ತರಂಗಿಣಿ