ಬೆಂಗಳೂರು : ಬೆಂಗಳೂರು ನಗರದ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನೋತ್ಸವದ ಅಂಗವಾಗಿ ಜೂನ್ 27ರ ಶನಿವಾರ ಸಾಯಂಕಾಲ 4 ಗಂಟೆಗೆ ಅತ್ಯಂತ ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ಪ್ಯಾಲೆಸ್ ರಸ್ತೆಯಲ್ಲಿರುವ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಈ ಭವ್ಯ ಕಾರ್ಯಕ್ರಮ ನಡೆಯಲಿದ್ದು, ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದೇಶ ಹಾಗೂ ನಾಡಿಗೆ ಅಭೂತಪೂರ್ವ ಕೊಡುಗೆ ನೀಡಿದ ಗಣ್ಯರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಗುತ್ತಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಚಿತ್ರದುರ್ಗದ ಶ್ರೀ ಮಾದರ ಚೆನ್ನಯ್ಯ ಮಠದ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಈ ಗಣರಾಜ್ಯದ ಪ್ರಮುಖ ಮುಖಂಡರ ಸಮಾಗಮ ನಡೆಯಲಿದೆ.
ಈ ಐತಿಹಾಸಿಕ ಸಮಾರಂಭಕ್ಕೆ ಭಾರತ ಸರ್ಕಾರದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕರ್ನಾಟಕ ಸರ್ಕಾರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹೋಟ್, ಕೇಂದ್ರ ಸಚಿವರುಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಶ್ರೀ ವಿ.ಸೋಮಣ್ಣ ಅವರುಗಳು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಲಿದ್ದಾರೆ. ಇವರೊಂದಿಗೆ ವೇದಿಕೆಯಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಎಂ. ಕೃಷ್ಣೇಗೌಡ ಮತ್ತು ಪದ್ಮಶ್ರೀ ಪುರಸ್ಕೃತ ಖ್ಯಾತ ಉದ್ಯಮಿ ಶ್ರೀ ಡಾ. ಪ್ರಶಾಂತ್ ಪ್ರಕಾಶ್ ಸೇರಿದಂತೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಹಲವು ಪ್ರಮುಖರು ಉಪಸ್ಥಿತರಿರಲಿದ್ದಾರೆ.
ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನವು ಈ ಬಾರಿ ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಘೋಷಿಸಿದ್ದು, ಗಣ್ಯರ ಸಾಧನೆಯನ್ನು ಕೊಂಡಾಡಿದೆ. ಸಾಮಾಜಿಕ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ ಖ್ಯಾತ ಉದ್ಯಮಿ ಶ್ರೀ ಟಿ. ವಿ. ಮೋಹನ್ ದಾಸ್ ಪೈ ಅವರಿಗೆ 'ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ' ನೀಡಿ ಸನ್ಮಾನಿಸಲಾಗುವುದು. ಧಾರ್ಮಿಕ ಕ್ಷೇತ್ರದ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹಾಗೂ ಪರಿಸರ ಕ್ಷೇತ್ರದ ಶ್ರೀ ಎ. ಸಿ. ಲಕ್ಷ್ಮಣ್ ಅವರಿಗೆ 'ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಗುವುದು.
ಇದೇ ವೇಳೆ, ನಮ್ಮ ಜಿಲ್ಲೆಯ ಹೆಮ್ಮೆಯ ಹಾಗೂ ಪ್ರೇರಣಾದಾಯಿ ಉದ್ಯಮಿಯಾಗಿ ಬೆಳೆದಿರುವ ಶ್ರೀ ಕೇಶವ ಅಮೈ ಅವರು ಪ್ರತಿಷ್ಠಿತ 'ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ರೈತರಿಗೆ ವರದಾನವಾಗುವಂತೆ ಮತ್ತು ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವಂತೆ ಸಂಶೋಧನಾತ್ಮಕವಾದ ಕೃಷಿ ಸಂಬಂಧಿತ ಯಂತ್ರೋಪಕರಣಗಳನ್ನು ಸೃಷ್ಟಿಸಿದ ಅವರ ಮಹತ್ವದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೇಶವ ಅಮೈ ಅವರ ಈ ಅಪೂರ್ವ ಸಂಶೋಧನಾ ಚಾತುರ್ಯ ಮತ್ತು ಕೃಷಿ ಪ್ರೇಮಕ್ಕೆ ಜಿಲ್ಲೆಯಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರತಿಷ್ಠಾನದ ಪ್ರಮುಖರು ಹಾಗೂ ಅವರ ಅಪಾರ ಹಿತೈಷಿಗಳು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ಕೇಶವ ಅಮೈ ಅವರೊಂದಿಗೆ ರಾಜ್ಯದ ಇತರೆ ಪ್ರಮುಖ ಸಾಧಕರಾದ ಶ್ರೀ ಎಸ್. ವಿ. ರಂಗನಾಥ್ (ಆಡಳಿತ), ಶ್ರೀ ಹೆಚ್. ಎ. ರಂಗನಾಥ್ (ಶಿಕ್ಷಣ), ಶ್ರೀ ಎಂ. ಆರ್. ಜೈಶಂಕರ್ (ಸಾಂಸ್ಕೃತಿಕ), ಶ್ರೀ ಬಿ.ಎಮ್. ಕೋಕರೆ (ಕೃಷಿ ಮತ್ತು ಕ್ರೀಡೆ), ಡಾ. ವಾಮದೇವಪ್ಪ (ಶಿಕ್ಷಣ), ಶ್ರೀ ವಿಕ್ರಂ ಮುತ್ತಣ್ಣ (ಪತ್ರಿಕೋದ್ಯಮ), ಶ್ರೀ ಜೈ ಪ್ರಕಾಶ್ ಗೌಡ (ಸಾಹಿತ್ಯ ಮತ್ತು ಸಾಮಾಜಿಕ), ಶ್ರೀ ರವಿಕುಮಾರ್ (ಕೃಷಿ), ಕು. ಯಶಸ್ವಿನಿ ಶರ್ಮ (ಸಾಂಸ್ಕೃತಿಕ ಇತಿಹಾಸ ಪುನರುತ್ಥಾನ), ಶ್ರೀಮತಿ ಪ್ರೇಮ ಗಣೇಶ್ (ಕೃಷಿ ಮತ್ತು ಮಹಿಳಾ ಸಬಲೀಕರಣ), ಕು. ರಶ್ಮಿ सावंत (ಸಾಹಿತ್ಯ ಮತ್ತು ಸಾಮಾಜಿಕ), ಡಾ. ತ್ರಿಸ್ಟಾ ರಾಮಮೂರ್ತಿ (ಶಿಕ್ಷಣ ಮತ್ತು ಸಾಮಾಜಿಕ), ಶ್ರೀ ಧರ್ಮೇಂದ್ರ ಹಾಗೂ ಶ್ರೀ ಮಹೇಶ್ ಗೌಡ (ಸಾಮಾಜಿಕ ಕ್ಷೇತ್ರ) ಅವರಿಗೂ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಈ ಮಹೋತ್ಸವದಲ್ಲಿ ಕೇಂದ್ರ ರಾಜ್ಯ ಖಾತೆ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ, ಶಾಸಕ ಶ್ರೀ ಸಿ.ಟಿ. ರವಿ, ಸಂಸದರುಗಳಾದ ಡಾ. ಸಿ.ಎನ್. ಮಂಜುನಾಥ್, ಶ್ರೀ ತೇಜಸ್ವಿ ಸೂರ್ಯ, ಶ್ರೀ ಪಿ.ಸಿ. ಮೋಹನ್, ಡಾ. ಕೆ. ಸುಧಾಕರ್, ಶ್ರೀ ಎಂ. ಮಲ್ಲೇಶ್ ಬಾಬು, ರಾಜ್ಯಸಭಾ ಸದಸ್ಯರಾದ ಶ್ರೀ ಜಗ್ಗೇಶ್, ಶ್ರೀ ಕೆ. ನಾರಾಯಣ್ ಮತ್ತು ಮಾಜಿ ರಾಜ್ಯಸಭಾ ಸದಸ್ಯರಾದ ಶ್ರೀ ಕೆ.ಸಿ. ರಾಮಮೂರ್ತಿ ಸೇರಿದಂತೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಅಪಾರ ಸಂಖ್ಯೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನಾಡಿನ ಇತಿಹಾಸದಲ್ಲಿ ಇದೊಂದು ಅತ್ಯಂತ ಪ್ರಮುಖ ಮತ್ತು ಸಾಂಸ್ಕೃತಿಕ ಮಹತ್ವದ ಕಾರ್ಯಕ್ರಮವಾಗಲಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಎಂ. ಕೃಷ್ಣೇಗೌಡ ಅವರು ವಿನಂತಿಸಿದ್ದಾರೆ.