image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸರ್ಕಾರದ ವಿರುದ್ಧ ಮುಸ್ಲಿಂ ಸಂಘಟನೆಗಳ ಒಕ್ಕೂಟದ ತೀವ್ರ ಅಸಮಾಧಾನ: ಹಕ್ಕೊತ್ತಾಯಗಳ ವರದಿ ಬಿಡುಗಡೆ

ಸರ್ಕಾರದ ವಿರುದ್ಧ ಮುಸ್ಲಿಂ ಸಂಘಟನೆಗಳ ಒಕ್ಕೂಟದ ತೀವ್ರ ಅಸಮಾಧಾನ: ಹಕ್ಕೊತ್ತಾಯಗಳ ವರದಿ ಬಿಡುಗಡೆ

ಬೆಂಗಳೂರು : ​ರಾಜ್ಯ ಸರ್ಕಾರದ ನೀತಿಗಳು ಮತ್ತು ಧೋರಣೆಗಳ ವಿರುದ್ಧ ಮುಸ್ಲಿಂ ಸಂಘಟನೆಗಳ ಒಕ್ಕೂಟವು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರದ ತಪ್ಪುಗಳ ದೊಡ್ಡ ಹೊರೆಪಟ್ಟಿಯನ್ನೇ ಬಿಡುಗಡೆ ಮಾಡಿದೆ. ಮುಸ್ಲಿಂ ಸಮುದಾಯ ಎದುರಿಸುತ್ತಿರುವ 10ಕ್ಕೂ ಹೆಚ್ಚು ಪ್ರಮುಖ ಕೊರತೆಗಳನ್ನು ವರದಿಯಲ್ಲಿ ಎತ್ತಿ ತೋರಿಸಿರುವ ಒಕ್ಕೂಟವು, ಮುಂಬರುವ ಮಳೆಗಾಲದ ಅಧಿವೇಶನದ ಒಳಗಾಗಿ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ ನೇರ ಛಾಟಿ ಬೀಸಿದೆ. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಬೃಹತ್ ಮುಸ್ಲಿಂ ಸಮಾವೇಶದಲ್ಲಿ ಒಕ್ಕೂಟದ ಮುಖಂಡರು ಒಕ್ಕೊರಲಿನಿಂದ ಈ ಹಕ್ಕೊತ್ತಾಯಗಳನ್ನು ಮಂಡಿಸಿದ್ದಾರೆ.

​ಮುಸ್ಲಿಂ ಸಂಘಟನೆಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಬಲವಾದ ಬೇಡಿಕೆ ಇಡಲಾಗಿದೆ. ಅದರಲ್ಲೂ ವಿಶೇಷವಾಗಿ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕನಿಷ್ಠ 4 ರಿಂದ 5 ಮುಸ್ಲಿಂ ಪ್ರತಿನಿಧಿಗಳನ್ನು ಕಣಕ್ಕಿಳಿಸಿ ಆಯ್ಕೆ ಮಾಡುವ ಮೂಲಕ ಪ್ರಾತಿನಿಧ್ಯದ ಕೊರತೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ. ಇದರೊಂದಿಗೆ, ಮಧುಸೂದನ್ ಆರ್. ನಾಯಕ್ ಅವರ ನೇತೃತ್ವದ ಜಾತಿ ಸಮೀಕ್ಷೆಗೆ ಕಟ್ಟುನಿಟ್ಟಾದ ಗಡುವು ನಿಗದಿಪಡಿಸಬೇಕು ಹಾಗೂ ವರದಿ ಕೈ ಸೇರಿದ 30 ದಿನಗಳ ಒಳಗಾಗಿ ಅದನ್ನು ಸದನದಲ್ಲಿ ಮಂಡಿಸಿ ಅಧಿಕೃತ ಕ್ರಿಯಾಯೋಜನೆ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗಿದೆ.

​ಸಮುದಾಯದ ಶೈಕ್ಷಣಿಕ ಮತ್ತು ಉದ್ಯೋಗದ ಹಿತದೃಷ್ಟಿಯಿಂದ, ಈ ಹಿಂದೆ ಇದ್ದ ಶೇಕಡಾ 4 ರಷ್ಟು ಪ್ರವರ್ಗ 2ಬಿ ಮೀಸಲಾತಿಯನ್ನು ತಕ್ಷಣವೇ ಮರುಸ್ಥಾಪಿಸಬೇಕು ಮತ್ತು ಈ ಬಗ್ಗೆ ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರ್ಕಾರವು ಸ್ಪಷ್ಟವಾದ ಪ್ರಮಾಣಪತ್ರ ಅಥವಾ ಹೇಳಿಕೆಯನ್ನು ಸಲ್ಲಿಸಬೇಕು ಎಂದು ಒಕ್ಕೂಟ ಹೇಳಿದೆ. ಇದಲ್ಲದೆ, 2022 ರ ಫೆಬ್ರವರಿ 5 ರಂದು ಹೊರಡಿಸಲಾಗಿದ್ದ ಹಿಜಾಬ್ ನಿಷೇಧದ ಸರ್ಕಾರಿ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ತರಗತಿ ಪ್ರವೇಶ, ಪರೀಕ್ಷೆ ಬರೆಯುವ ಅವಕಾಶ ಮತ್ತು ಸಾಂಸ್ಥಿಕ ಘನತೆಯನ್ನು ರಕ್ಷಿಸಲು ಕಟ್ಟುನಿಟ್ಟಾದ 'ಧಾರ್ಮಿಕ ಉಡುಪು ತಾರತಮ್ಯ ರಹಿತ ಮಾರ್ಗಸೂಚಿಗಳನ್ನು' ಸರ್ಕಾರ ಅಧಿಸೂಚಿಸಬೇಕು ಎಂಬುದು ಒಕ್ಕೂಟದ ಪ್ರಮುಖ ಬೇಡಿಕೆಗಳಲ್ಲೊಂದಾಗಿದೆ.

​ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020 ಅನ್ನು ರದ್ದುಗೊಳಿಸಲು ಅಥವಾ ಬದಲಿಸಲು ಹೊಸ ವಿಧೇಯಕ ತರಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಈ ಮೂಲಕ ನಿಯಂತ್ರಿತ ಪರವಾನಗಿ ಚೌಕಟ್ಟನ್ನು ಮರುಸ್ಥಾಪಿಸಿ, ಜಾನುವಾರು ವ್ಯಾಪಾರಿಗಳ ಜೀವನೋಪಾಯವನ್ನು ರಕ್ಷಿಸಬೇಕು ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವಿಕೆಗೆ (ವಿಜಿಲಾಂಟಿಸಂ) ಕುಮ್ಮಕ್ಕು ನೀಡುವ ನಿಬಂಧನೆಗಳನ್ನು ತೆಗೆದುಹಾಕಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ, ಕ್ಯಾಬಿನೆಟ್ ಈಗಾಗಲೇ ಅನುಮೋದಿಸಿರುವ ಮತಾಂತರ ವಿರೋಧಿ ಕಾಯ್ದೆ ರದ್ದತಿ ವಿಧೇಯಕವನ್ನು ಸದನದಲ್ಲಿ ಮಂಡಿಸಿ ಅಂಗೀಕರಿಸಬೇಕು ಮತ್ತು ಯಾವುದೇ ಬಲವಂತವಿಲ್ಲದ ಸಂದರ್ಭಗಳಲ್ಲಿ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗುವ ಅಂತರಧರ್ಮೀಯ ದಂಪತಿಗಳು ಹಾಗೂ ಧಾರ್ಮಿಕ ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ತಡೆಯಲು ಮಧ್ಯಂತರ ನಿರ್ದೇಶನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

​ರಾಜ್ಯದಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್‌ಗಿರಿ, ಆರ್ಥಿಕ ಬಹಿಷ್ಕಾರ ಮತ್ತು ದ್ವೇಷ ಭಾಷಣಗಳನ್ನು ಜಿಲ್ಲಾವಾರು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲು 'ಕೋಮು ದ್ವೇಷ, ದ್ವೇಷ ಭಾಷಣ ಮತ್ತು ವಿಜಿಲಾಂಟಿಸಂ ಮೇಲ್ವಿಚಾರಣಾ ಪ್ರಾಧಿಕಾರ'ವನ್ನು ರಚಿಸಬೇಕು ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ. ಇದರೊಂದಿಗೆ, ಚುನಾವಣಾ ಮತದಾರರ ಪಟ್ಟಿಯಿಂದ ನೈಜ ಮತದಾರರ ಹೆಸರುಗಳನ್ನು ತಪ್ಪುತಪ್ಪಾಗಿ ಕೈಬಿಡುವುದನ್ನು ತಡೆಯಲು ರಾಜ್ಯ ಮಟ್ಟದ ವಿಶೇಷ ರಕ್ಷಣೆ ಮತ್ತು ಮತದಾರರ ಸಹಾಯ ಕಾರ್ಯಪಡೆಯನ್ನು ರಚಿಸಬೇಕು. ವಾರ್ಡ್ ಮಟ್ಟದ ಸಹಾಯ ಕೇಂದ್ರಗಳು ಮತ್ತು ಬೂತ್ ವಾರು ಹೆಸರು ಅಳಿಸುವಿಕೆಯ ದತ್ತಾಂಶವನ್ನು ಒದಗಿಸುವ ಮೂಲಕ ದಾಖಲೆಗಳ ಕೊರತೆ ಇರುವ ಮತದಾರರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಲಾಗಿದೆ. ಇದೇ ವೇಳೆ ಟೌನ್‌ಹಾಲ್ ಸಮಾವೇಶದಲ್ಲಿ ಒಟ್ಟಾಗಿ ಸೇರಿದ ಮುಸ್ಲಿಂ ಮುಖಂಡರು, ಎಸ್‌ಐಆರ್ (SIR) ಜಾರಿಗೆ ತರಲು ಮುಂದಾಗಿರುವ ಸರ್ಕಾರದ ನೀತಿಯನ್ನು ತೀವ್ರವಾಗಿ ವಿರೋಧಿಸಿದ್ದು, ಯಾವುದೇ ಕಾರಣಕ್ಕೂ ಎಸ್‌ಐಆರ್ ಜಾರಿಗೊಳಿಸಬಾರದು ಎಂದು ಒಕ್ಕೊರಲಿನಿಂದ ಎಚ್ಚರಿಸಿದ್ದಾರೆ.

Category
ಕರಾವಳಿ ತರಂಗಿಣಿ